ಕೊಟ್ಟಿಗೆಹಾರ : ತರುವೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಿವೇಶನ ರಹಿತ ಗ್ರಾಮಸ್ಥರು ಮನೆ ನಿರ್ಮಾಣಕ್ಕೆ ಜಾಗ ಮಂಜೂರು ಮಾಡುವಂತೆ ಮೂಡಿಗೆರೆ ಕ್ಷೇತ್ರದ ಶಾಸಕಿ ನಯನ ಮೋಟಮ್ಮ ಅವರಿಗೆ ಮನವಿ ಸಲ್ಲಿಸಿದರು.
ಸುಮಾರು 16ಕ್ಕೂ ಹೆಚ್ಚು ನಿವೇಶನ ರಹಿತರು ಶಾಸಕರ ಭವನಕ್ಕೆ ತೆರಳಿ, ಹಲವು ವರ್ಷಗಳಿಂದ ಜಾಗ ಹಂಚಿಕೆ ಆಗದಿರುವುದರಿಂದ ಎದುರಾಗುತ್ತಿರುವ ಸಂಕಷ್ಟಗಳನ್ನು ವಿವರಿಸಿದರು.

ಮನೆ ಕಟ್ಟಿಕೊಳ್ಳಲು ಸ್ವಂತ ಜಾಗವಿಲ್ಲದೆ ತೊಂದರೆ ಅನುಭವಿಸುತ್ತಿರುವುದಾಗಿ ತಿಳಿಸಿ, ಕಂದಾಯ ಇಲಾಖೆಯ ಲಭ್ಯ ಜಾಗಗಳನ್ನು ಗುರುತಿಸಿ ತಕ್ಷಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.ಗ್ರಾಮಸ್ಥರ ಮನವಿಯನ್ನು ಸ್ವೀಕರಿಸಿ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ತಹಸೀಲ್ದಾರ್ ಅವರೊಂದಿಗೆ ಕೂಡಲೇ ಚರ್ಚಿಸಿ, ಸಮಸ್ಯೆಯನ್ನು ಆದಷ್ಟು ಬೇಗ ಪರಿಹರಿಸುವುದಾಗಿ ಭರವಸೆ ನೀಡಿದರು. ಕಂದಾಯ ಜಾಗ ಲಭ್ಯತೆ ಕುರಿತು ಪರಿಶೀಲನೆ ನಡೆಸಿ, ಜಾಗ ಇದ್ದಲ್ಲಿ ಆದ್ಯತೆಯ ಮೇರೆಗೆ ಹಂಚಿಕೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಪೂರ್ಣಿಮಾ, ಸರೀನಾ, ಲತಾ, ರಿಜ್ವಾನ, ಲಕ್ಷ್ಮಿ, ಗಾನವಿ, ಸರೋಜ, ಪ್ರಶಾಂತಿ, ದೀಪ, ಪಾರ್ವತಿ, ರವಿ, ಸುರೇಶ್, ಕೇಶವ, ಅಬ್ಬಾಸ್, ರವಿ ಸೇರಿದಂತೆ ಇನ್ನೂ ಮುಂತಾದ ಗ್ರಾಮಸ್ಥರು ಉಪಸ್ಥಿತರಿದ್ದರು.
