ಉಡುಪಿ: ಸಮಾಜದ ಸಂಪರ್ಕವೇ ಇಲ್ಲದೆ ಅನಾಗರಿಕವಾಗಿ ಬದುಕು ಸಾಗಿಸುತ್ತಿದ್ದ ಒಂದೇ ಕುಟುಂಬದ ಮೂವರನ್ನು ರಕ್ಷಿಸಲಾಗಿದೆ. ಶಿರ್ವ ಪೋಲಿಸ್ ಠಾಣೆ ವ್ಯಾಪ್ತಿಗೆ ಬರುವ ಮೂಡುಬೆಳ್ಳೆಯಲ್ಲಿ ಈ ಘಟನೆ ನಡೆದಿದ್ದು ಕಾರ್ಯಾಚರಣೆಯ ನೇತೃತ್ವವನ್ನು ಜಿಲ್ಲಾ ನಾಗರೀಕ ಸಮಿತಿ ವಹಿಸಿಕೊಂಡಿತ್ತು.
ರಕ್ಷಣೆಗೆ ಒಳಗಾದ ಪತಿ ಮತ್ತು ಪತ್ನಿ ವೃದ್ಧರಾಗಿದ್ದಾರೆ. ಅಂದಾಜು ಎಪ್ಪತ್ತು ವರ್ಷ ಆಸುಪಾಸಿನ ಎಡ್ವಿನ್ ಅಮ್ಮನ್ನ, ಜ್ಯೋತಿ ಅಮ್ಮನ್ನ, ಹಾಗೂ ಮಗಳು ಈ ಮನೆಯಲ್ಲಿ ನಾಗರೀಕ ಸಮಾಜದಿಂದ ಅಕ್ಷರಶಃ ಬೇರ್ಪಟ್ಟು ಬದುಕು ನಡೆಸುತ್ತಿದ್ದರು. ಜೊತೆಗೆ ಮೂವರೂ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರೆಂದು ತಿಳಿದುಬಂದಿದೆ. ಕಾರ್ಕಳದ ಹೊಸಬೆಳಕು ಆಶ್ರಮದ ಸಂಚಾಲಕಿ ತನುಲಾ ತರುಣ್ ಮೂವರಿಗೂ ಆಶ್ರಯ ಒದಗಿಸಿ ಮಾನವೀಯತೆ ಮೆರೆದಿದ್ದಾರೆ. ಆಪ್ತ ಸಮಾಲೋಚನೆ ನಡೆಸಿದಾಗ ವೃದ್ಧರು ಮನೆಯಲ್ಲಿ ಚಿನ್ನಾಭರಣ ಇರುವುದಾಗಿ ಹೇಳಿಕೊಂಡಿದ್ದರು.ಇಲಾಖೆಯ ಸಮಕ್ಷಮದಲ್ಲಿ ಹುಡುಕಾಟ ನಡೆಸಿ ಚಿನ್ನಾಭರಣಗಳನ್ನು ಅವರ ವಶಕ್ಕೆ ನೀಡಲಾಯಿತು.
ಕಾರ್ಯಚರಣೆಯಲ್ಲಿ ನಾಗರೀಕ ಸಮಿತಿಯ ಸಂಚಾಲಕ ನಿತ್ಯಾನಂದ ಒಳಕಾಡು, ಗ್ರಾಮ ಪಂಚಾಯತಿ ಅಧ್ಯಕ್ಷೆ ದಿವ್ಯ ವಿ ಆಚಾರ್ಯ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಆಶಾಲತಾ ಮೂಡುಬೆಳ್ಳೆ, ವಿನ್ಸೆಂಟ್ ಫೆರ್ನಾಂಡಿಸ್, ಎಸ್.ಐ ಮಂಜುನಾಥ್, 112 ಸಹಾಯವಾಣಿ ಕೇಂದ್ರದ ಎ.ಎಸ್.ಐ ಗಂಗಾಧರ, ಹೊಸಬೆಳಕು ಆಶ್ರಮದ ಮೆಲ್ವೀಚಾರಕ ಗೌರೀಶ್, ರವಿರಾಜ್ ಆಚಾರ್ಯ, ಮೂಡುಬೆಳ್ಳೆ, ಸುಧಾಕರ್ ಪೂಜಾರಿ, ಧನಲಕ್ಷ್ಮಿ ಪೂಜಾರಿ ಮೂಡುಬೆಳ್ಳೆ, ವಿಜಯಪ್ರಕಾಶ್ ಮೂಡುಬೆಳ್ಳೆ, ಪ್ರಕಾಶ್ ಮೂಡುಬೆಳ್ಳೆ ಭಾಗಿಯಾಗಿದ್ದರು.
