Thursday, March 26, 2026
Homeರಾಜಕೀಯಮನರೇಗಾ ರದ್ದು: ಪ್ರಧಾನಿ ಮೋದಿ ವಿರುದ್ಧ ಸಿಎಂ ಕೆಂಡಾಮಂಡಲ!

ಮನರೇಗಾ ರದ್ದು: ಪ್ರಧಾನಿ ಮೋದಿ ವಿರುದ್ಧ ಸಿಎಂ ಕೆಂಡಾಮಂಡಲ!

ಬೆಂಗಳೂರು: ದೇಶದ ಗ್ರಾಮೀಣ ಬಡವರ ಸಂಜೀವಿನಿಯಾಗಿದ್ದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ (ಮನರೇಗಾ) ಕಾಯ್ದೆಯನ್ನು ರದ್ದುಗೊಳಿಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ಮುಖ್ಯಮಂತ್ರಿಗಳು ತೀವ್ರವಾಗಿ ಖಂಡಿಸಿದ್ದಾರೆ. ಇತ್ತೀಚಿನ ಚಳಿಗಾಲದ ಅಧಿವೇಶನದಲ್ಲಿ ಯುಪಿಎ ಸರ್ಕಾರದ ಅವಧಿಯ ಈ ಐತಿಹಾಸಿಕ ಕಾಯ್ದೆಯನ್ನು ಬುಡಮೇಲು ಮಾಡಿ, ಅದರ ಜಾಗದಲ್ಲಿ ‘ವಿಕಸಿತ್ ಭಾರತ್ ಗ್ಯಾರಂಟಿ ಫಾರ್ ರೋಜಗಾರ್ ಅಜೀವಿಕ್ ಮಿಷನ್’ (VB G RAM G) ಎಂಬ ಹೊಸ ಕಾಯ್ದೆಯನ್ನು ಜಾರಿಗೆ ತಂದಿರುವುದು ಪ್ರಜಾಪ್ರಭುತ್ವ ವಿರೋಧಿ ಮತ್ತು ಸರ್ವಾಧಿಕಾರಿ ಧೋರಣೆಯ ಪರಮಾವಧಿ ಎಂದು ಅವರು ಕಿಡಿಕಾರಿದ್ದಾರೆ.

ಬಡವರ ಬದುಕಿಗೆ ಬೆಂಕಿ ಇಟ್ಟ ಕೇಂದ್ರ ಸರ್ಕಾರ

ಕಳೆದ ಎರಡು ದಶಕಗಳಿಂದ ಗ್ರಾಮೀಣ ಭಾಗದ ಕೂಲಿಕಾರರು ಮತ್ತು ಸಣ್ಣ ರೈತರ ಪಾಲಿಗೆ ಆಸರೆಯಾಗಿದ್ದ ಉದ್ಯೋಗದ ಹಕ್ಕನ್ನು ಮೋದಿ ಸರ್ಕಾರ ಕಿತ್ತುಕೊಂಡಿದೆ. ಯಾವುದೇ ರಾಜ್ಯಗಳ ಜೊತೆ ಸಮಾಲೋಚನೆ ನಡೆಸದೆ, ಕೇವಲ ಎಂಟು ಗಂಟೆಗಳ ಕಾಲ ಚರ್ಚೆ ನಡೆಸಿ ಸದನವನ್ನು ಬುಲ್ಡೋಜ್ ಮಾಡುವ ಮೂಲಕ ಈ ಮನೆಹಾಳು ಕಾಯ್ದೆಯನ್ನು ಪಾಸ್ ಮಾಡಿಕೊಳ್ಳಲಾಗಿದೆ. ಈ ನಿರ್ಧಾರದಿಂದಾಗಿ ದೇಶದ 12.16 ಕೋಟಿ ಕಾರ್ಮಿಕರು ಬೀದಿಗೆ ಬೀಳುವಂತಾಗಿದೆ. ಇದರಲ್ಲಿ ಶೇ. 53 ಕ್ಕಿಂತಲೂ ಅಧಿಕ ಸಂಖ್ಯೆಯಲ್ಲಿರುವ ಮಹಿಳೆಯರು ಹಾಗೂ ದಲಿತ ಮತ್ತು ಹಿಂದುಳಿದ ವರ್ಗದ ಕಾರ್ಮಿಕರ ಬದುಕಿಗೆ ಕೇಂದ್ರ ಸರ್ಕಾರ ಬೆಂಕಿ ಇಟ್ಟಿದೆ ಎಂದು ಮುಖ್ಯಮಂತ್ರಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕರ್ನಾಟಕವೊಂದರಲ್ಲೇ ಸುಮಾರು 71 ಲಕ್ಷಕ್ಕೂ ಅಧಿಕ ಸಕ್ರಿಯ ಕಾರ್ಮಿಕರಿದ್ದು, ಇವರೆಲ್ಲರ ಉದ್ಯೋಗದ ಹಕ್ಕು ಈಗ ನೀರು ಪಾಲಾಗಿದೆ ಎಂದರು.

ಕಾರ್ಪೊರೇಟ್ ಹಿತಾಸಕ್ತಿಗಾಗಿ ಸಂಚು

ಬಿಜೆಪಿಯ ಈ ನಡೆ ಕೇವಲ ಹೆಸರು ಬದಲಾವಣೆಯಲ್ಲ, ಬದಲಿಗೆ ಗ್ರಾಮೀಣ ಆರ್ಥಿಕತೆಯನ್ನು ಧ್ವಂಸ ಮಾಡುವ ದೊಡ್ಡ ಸಂಚಾಗಿದೆ. ಹಳ್ಳಿಗರು ತಮ್ಮ ವಾಸಸ್ಥಳದಲ್ಲೇ ಗೌರವಯುತವಾಗಿ ಬದುಕುವುದನ್ನು ತಪ್ಪಿಸಿ, ಅವರನ್ನು ಕಾರ್ಪೊರೇಟ್ ಕೃಷಿ ಕಂಪನಿಗಳಿಗೆ ಅಗ್ಗದ ಕೂಲಿ ಆಳುಗಳನ್ನಾಗಿ ಒದಗಿಸಲು ಈ ಹೊಸ ಕಾಯ್ದೆಯನ್ನು ರೂಪಿಸಲಾಗಿದೆ. ಹಿಂದೆ ಆಹಾರದ ಹಕ್ಕು, ಶಿಕ್ಷಣದ ಹಕ್ಕು ಮತ್ತು ಮಾಹಿತಿ ಹಕ್ಕುಗಳಂತಹ ಜನಪರ ಕಾಯ್ದೆಗಳನ್ನು ತಂದಿದ್ದ ಯುಪಿಎ ಸರ್ಕಾರದ ಸಾಧನೆಗಳನ್ನು ಹಂತ-ಹಂತವಾಗಿ ದುರ್ಬಲಗೊಳಿಸುತ್ತಿರುವ ಮೋದಿ ಸರ್ಕಾರ, ಈಗ ಹಳ್ಳಿಗರ ಉದ್ಯೋಗದ ಹಕ್ಕಿಗೂ ಕುತ್ತು ತಂದಿದೆ. ಇದು ಗಾಂಧೀಜಿಯವರ ಗ್ರಾಮೀಣ ಭಾರತದ ಕನಸನ್ನು ಹೂತುಹಾಕಿ, ಮನುಸ್ಮೃತಿಯ ಆಶಯಗಳನ್ನು ಜಾರಿಗೆ ತರುವ ಪ್ರಯತ್ನವಾಗಿದೆ ಎಂದು ಟೀಕಿಸಿದ್ದಾರೆ.

ಸಂವಿಧಾನ ವಿರೋಧಿ ಮತ್ತು ಜನವಿರೋಧಿ ನಡೆ

ಹೊಸ ಕಾಯ್ದೆಯು ಸಂವಿಧಾನದ ಆರ್ಟಿಕಲ್ 258 ಮತ್ತು 280 ಕ್ಕೆ ವಿರುದ್ಧವಾಗಿದ್ದು, ಗ್ರಾಮ ಪಂಚಾಯತಿಗಳ ಅಧಿಕಾರವನ್ನು ಕಸಿದುಕೊಳ್ಳುತ್ತದೆ. 73 ನೇ ಸಾಂವಿಧಾನಿಕ ತಿದ್ದುಪಡಿಯ ಆಶಯಗಳಾದ ವಿಕೇಂದ್ರೀಕರಣವನ್ನು ಇದು ನಾಶಪಡಿಸುತ್ತದೆ. ರಾಮನ ಹೆಸರನ್ನು ಬಳಸಿಕೊಂಡು ಅರಾವಳಿ ಪರ್ವತದಂತಹ ನೈಸರ್ಗಿಕ ಸಂಪತ್ತನ್ನು ದೋಚಲು ಮತ್ತು ಅದಾನಿ-ಅಂಬಾನಿಯಂತಹ ಕಾರ್ಪೊರೇಟ್ ಮಿತ್ರರಿಗೆ ಗಣಿಗಾರಿಕೆ ನೀಡಲು ಸರ್ಕಾರ ಇಂತಹ ಹಾದಿ ಹಿಡಿದಿದೆ. ರಾಷ್ಟ್ರಪಿತ ಮಹಾತ್ಮ ಗಾಂಧಿಯವರ ಹೆಸರನ್ನು ಯೋಜನೆಯಿಂದ ತೆಗೆದುಹಾಕುವ ಮೂಲಕ ಬಿಜೆಪಿಯು ಗೋಡ್ಸೆಯ ನಂತರ ಎರಡನೇ ಬಾರಿಗೆ ಗಾಂಧೀಜಿಯವರನ್ನು ಹತ್ಯೆ ಮಾಡಿದಂತಾಗಿದೆ ಎಂದು ಮುಖ್ಯಮಂತ್ರಿಗಳು ಮಾರ್ಮಿಕವಾಗಿ ನುಡಿದಿದ್ದಾರೆ.

ತೀವ್ರ ಹೋರಾಟದ ಎಚ್ಚರಿಕೆ

ಈಗಾಗಲೇ ಈ ಕುರಿತು ಪ್ರತಿಭಟನಾಪೂರ್ವಕ ಪತ್ರವನ್ನು ಕೇಂದ್ರಕ್ಕೆ ಬರೆಯಲಾಗಿದ್ದು, ಈ ದುಷ್ಟ ಕಾನೂನಿನ ವಿರುದ್ಧ ದೇಶಾದ್ಯಂತ ದೊಡ್ಡ ಮಟ್ಟದ ಆಂದೋಲನ ಆರಂಭವಾಗಲಿದೆ ಎಂದು ಮುಖ್ಯಮಂತ್ರಿಗಳು ಎಚ್ಚರಿಸಿದ್ದಾರೆ. ಈ ಹಿಂದೆ ನಡೆದ ರೈತ ಹೋರಾಟದ ಮಾದರಿಯಲ್ಲೇ ಈಗ ಗ್ರಾಮೀಣ ಮಹಿಳೆಯರು ಮತ್ತು ಕೂಲಿಕಾರರು ಬೀದಿಗೆ ಇಳಿಯಲಿದ್ದಾರೆ. ಮೋದಿ ಸರ್ಕಾರ ಕೂಡಲೇ ಈ ಹೊಸ ಕಾಯ್ದೆಯನ್ನು ರದ್ದುಗೊಳಿಸಿ, ಹಳೆಯ ಮನರೇಗಾ ಕಾಯ್ದೆಯನ್ನೇ ಮರುಜಾರಿಗೊಳಿಸಬೇಕು ಎಂದು ರಾಜ್ಯ ಸರ್ಕಾರವು ಆಗ್ರಹಿಸಿದೆ. ಮಾಧ್ಯಮಗಳು ಈ ಕಾಯ್ದೆಗಳ ನಡುವಿನ ವ್ಯತ್ಯಾಸವನ್ನು ಜನರಿಗೆ ತಿಳಿಸುವ ಮೂಲಕ ಜಾಗೃತಿ ಮೂಡಿಸಬೇಕೆಂದು ಸಿಎಂ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!