Friday, March 27, 2026
Homeರಾಜಕೀಯಗ್ಯಾರಂಟಿ ಹೆಸರಲ್ಲಿ ರಾಜ್ಯಕ್ಕೆ ದ್ರೋಹ ಮಾಡುತ್ತಿದೆ 'ಹಿಂದೂ ವಿರೋಧಿ' ಕಾಂಗ್ರೆಸ್ - ಬಿ.ವೈ.ವಿಜಯೇಂದ್ರ ವಾಗ್ದಾಳಿ

ಗ್ಯಾರಂಟಿ ಹೆಸರಲ್ಲಿ ರಾಜ್ಯಕ್ಕೆ ದ್ರೋಹ ಮಾಡುತ್ತಿದೆ ‘ಹಿಂದೂ ವಿರೋಧಿ’ ಕಾಂಗ್ರೆಸ್ – ಬಿ.ವೈ.ವಿಜಯೇಂದ್ರ ವಾಗ್ದಾಳಿ

ಬೆಂಗಳೂರು: ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು ಸಂಪೂರ್ಣವಾಗಿ ಗೊಂದಲದ ಗೂಡಾಗಿದ್ದು, ಅಧಿಕಾರಕ್ಕಾಗಿ ಹಿಂದೂ ವಿರೋಧಿ ನೀತಿ ಹಾಗೂ ಅಲ್ಪಸಂಖ್ಯಾತರ ಓಲೈಕೆಗೆ ಇಳಿದಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತೀವ್ರವಾಗಿ ವಾಗ್ದಾಳಿ ನಡೆಸಿದ್ದಾರೆ.

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ‘ಜಗನ್ನಾಥ ಭವನ’ದಲ್ಲಿ ನಡೆದ ಮಹತ್ವದ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, ಧರ್ಮಸ್ಥಳದಂತಹ ಪವಿತ್ರ ಕ್ಷೇತ್ರದ ಭಾವನೆಗಳಿಗೆ ಧಕ್ಕೆ ತರುವ ಷಡ್ಯಂತ್ರದ ಹಿಂದೆ ಅರ್ಬನ್ ನಕ್ಸಲರ ಕೈವಾಡವಿದೆ ಮತ್ತು ಸರ್ಕಾರ ಅವರ ತಾಳಕ್ಕೆ ತಕ್ಕಂತೆ ಕುಣಿಯುತ್ತಿದೆ ಎಂದು ಕಿಡಿಕಾರಿದರು. ಹಾದಿಬೀದಿಯಲ್ಲಿ ಹೋಗುವವರ ಮಾತು ಕೇಳಿ ಕೋಟ್ಯಂತರ ಭಕ್ತರ ನಂಬಿಕೆಗೆ ಧಕ್ಕೆ ತಂದಿರುವ ಮುಖ್ಯಮಂತ್ರಿಗಳು ಈವರೆಗೂ ಕ್ಷಮೆ ಯಾಚಿಸದೆ ಇರುವುದು ಅವರ ಉದ್ಧಟತನವನ್ನು ತೋರಿಸುತ್ತದೆ ಎಂದು ಆಪಾದಿಸಿದರು.

ಸರ್ಕಾರದ ವೈಫಲ್ಯಗಳನ್ನು ಪ್ರಶ್ನಿಸುವವರ ಬಾಯಿ ಮುಚ್ಚಿಸಲು ಸಿದ್ದರಾಮಯ್ಯ ಸರ್ಕಾರವು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹರಣ ಮಾಡುತ್ತಿದೆ. ಸದನದಲ್ಲಿ ಯಾವುದೇ ಚರ್ಚೆಗೆ ಅವಕಾಶ ನೀಡದೆ ದ್ವೇಷ ಭಾಷಣದ ಹೆಸರಲ್ಲಿ ಮಸೂದೆ ತಂದಿರುವುದು ಪ್ರಜಾಪ್ರಭುತ್ವ ವಿರೋಧಿ ನಡೆಯಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಸರ್ಕಾರವನ್ನು ಟೀಕಿಸಿದರೆ ಹತ್ತು ವರ್ಷ ಜೈಲಿಗೆ ಹಾಕುವ ಷಡ್ಯಂತ್ರವು 1975ರ ಇಂದಿರಾ ಗಾಂಧಿಯವರ ತುರ್ತು ಪರಿಸ್ಥಿತಿಯ ಕರಾಳ ದಿನಗಳನ್ನು ನೆನಪಿಸುತ್ತಿದೆ. ಇದು ರಾಜ್ಯದಲ್ಲಿ ಅಸಹಿಷ್ಣುತೆಯ ಪ್ರತೀಕವಾಗಿದ್ದು, ಕಾಂಗ್ರೆಸ್ ತನ್ನ ಭ್ರಷ್ಟಾಚಾರ ಮತ್ತು ವಿಫಲತೆಗಳನ್ನು ಮುಚ್ಚಿ ಹಾಕಿಕೊಳ್ಳಲು ಇಂತಹ ಕರಾಳ ಕಾನೂನುಗಳನ್ನು ಜಾರಿಗೆ ತರುತ್ತಿದೆ ಎಂದು ಗುಡುಗಿದರು.

ಇದೇ ವೇಳೆ ಗೋ ಹಂತಕರ ಪರವಾಗಿ ಸರ್ಕಾರ ಅನುಕಂಪ ತೋರಿಸುತ್ತಿದೆ ಎಂದು ಆರೋಪಿಸಿದ ವಿಜಯೇಂದ್ರ, ಪೊಲೀಸರೇ ಠಾಣೆಯಲ್ಲಿ ಜಾಮೀನು ನೀಡುವಂತಹ ವ್ಯವಸ್ಥೆ ತರಲು ಹೊರಟಿದ್ದು ದೇಶದ್ರೋಹದ ಕೆಲಸವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಗ್ಯಾರಂಟಿ ಯೋಜನೆಗಳ ವಿಚಾರದಲ್ಲಿಯೂ ಸರ್ಕಾರ ದ್ವಂದ್ವ ನೀತಿ ಅನುಸರಿಸುತ್ತಿದ್ದು, ಒಂದು ಕೈಯಿಂದ ಗೃಹಲಕ್ಷ್ಮಿಯರಿಗೆ ಎರಡು ಸಾವಿರ ರೂಪಾಯಿ ನೀಡಿ ಮತ್ತೊಂದು ಕೈಯಿಂದ ಅಬಕಾರಿ ತೆರಿಗೆಯನ್ನು ಶೇ. 35ರಷ್ಟು ಹೆಚ್ಚಿಸುವ ಮೂಲಕ ಬಡ ಕುಟುಂಬಗಳ ಹೊಟ್ಟೆಯ ಮೇಲೆ ಹೊಡೆಯುತ್ತಿದೆ. ಕುಡುಕರ ಕಾಟದಿಂದ ಬಡ ಹೆಣ್ಣುಮಕ್ಕಳಿಗೆ ಅನ್ಯಾಯವಾಗುತ್ತಿದೆ ಎಂಬ ಕನಿಷ್ಠ ಜ್ಞಾನವೂ ಅನುಭವಿ ಸಿಎಂ ಸಿದ್ದರಾಮಯ್ಯನವರಿಗಿಲ್ಲ ಎಂದು ಟೀಕಿಸಿದರು.

ರಾಜ್ಯದ ಶಿಕ್ಷಣ ನೀತಿ ಮತ್ತು ಹೂಡಿಕೆ ವಿಚಾರದಲ್ಲೂ ಸರ್ಕಾರ ವಿಫಲವಾಗಿದೆ ಎಂದು ದೂರಿದ ವಿಜಯೇಂದ್ರ, ಕರ್ನಾಟಕದ ಶಿಕ್ಷಣ ತಜ್ಞರನ್ನು ಕಡೆಗಣಿಸಿ ಮಹಾರಾಷ್ಟ್ರದವರನ್ನು ಕರೆತಂದಿರುವುದು ರಾಜ್ಯಕ್ಕೆ ಮಾಡಿದ ಅವಮಾನ ಎಂದರು. ಫಾಕ್ಸ್ ಕಾನ್, ಏಥರ್ ಮತ್ತು ಟೊಯೊಟಾದಂತಹ ಕಂಪನಿಗಳು ರಾಜ್ಯ ತೊರೆಯುತ್ತಿರುವುದಕ್ಕೆ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಉದ್ಯಮಿಗಳಿಗೆ ನೀಡುತ್ತಿರುವ ಧಮ್ಕಿಯೇ ಕಾರಣ ಎಂದು ಆಪಾದಿಸಿದರು. ಉತ್ತರ ಕರ್ನಾಟಕದ ಜ್ವಲಂತ ಸಮಸ್ಯೆಗಳಿಗೆ ಅಧಿವೇಶನದಲ್ಲಿ ಉತ್ತರಿಸುವ ಬದಲು ಸಚಿವರು ಬ್ರೇಕ್ ಫಾಸ್ಟ್ ಮತ್ತು ಡಿನ್ನರ್ ಸಭೆಗಳಲ್ಲೇ ಕಾಲಹರಣ ಮಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು, ಪ್ರಧಾನಿ ಮೋದಿಯವರ ಜನಪ್ರಿಯತೆ ಸಹಿಸಲಾಗದೆ ಕಾಂಗ್ರೆಸ್ ಮೊಸಳೆ ಕಣ್ಣೀರು ಸುರಿಸುತ್ತಿದೆ ಎಂದು ಲೇವಡಿ ಮಾಡಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!