Tuesday, February 10, 2026
Homeವಿಶೇಷಒಬ್ಬ ಮಗನಿಗಾಗಿ 10 ಹೆಣ್ಣು ಮಕ್ಕಳು: ಕೊನೆಗೆ ಮಗ ಬಂದಾಗ ಹೆಣ್ಣುಮಕ್ಕಳ ಹೆಸರೇ ಮರೆತ ಅಪ್ಪ!

ಒಬ್ಬ ಮಗನಿಗಾಗಿ 10 ಹೆಣ್ಣು ಮಕ್ಕಳು: ಕೊನೆಗೆ ಮಗ ಬಂದಾಗ ಹೆಣ್ಣುಮಕ್ಕಳ ಹೆಸರೇ ಮರೆತ ಅಪ್ಪ!

ಹರಿಯಾಣ: ತಂತ್ರಜ್ಞಾನ ಎಷ್ಟೇ ಮುಂದುವರಿದಿದ್ದರೂ, ಭಾರತದಲ್ಲಿನ ಕೆಲವು ಮನಸ್ಥಿತಿಗಳು ಮಾತ್ರ ಇನ್ನೂ ಕತ್ತಲೆಯಲ್ಲೇ ಇವೆ ಎಂಬುದಕ್ಕೆ ಹರಿಯಾಣದ ಈ ಘಟನೆ ಒಂದು ಕಟು ನಿದರ್ಶನ. ಹರಿಯಾಣದ ಸಿರ್ಸಾ ಜಿಲ್ಲೆಯ ಬಪ್ಪನ್ ಗ್ರಾಮದ ನಿವಾಸಿ ಗುರ್ಜಂತ ಸಿಂಗ್ , ಒಬ್ಬ ವಂಶೋದ್ಧಾರಕನ ಹಂಬಲಕ್ಕಾಗಿ ಸತತವಾಗಿ ಹತ್ತು ಹೆಣ್ಣು ಮಕ್ಕಳನ್ನು ಪಡೆದು, ಕೊನೆಗೂ ಹನ್ನೊಂದನೇ ಮಗುವಾಗಿ ಗಂಡು ಮಗನನ್ನು ಪಡೆದಿದ್ದಾನೆ. ದುರಂತವೆಂದರೆ ಗಂಡು ಮಗುವಿನ ವ್ಯಾಮೋಹದ ಮುಂದೆ ಈ ತಂದೆಗೆ ತನ್ನ ಹತ್ತು ಹೆಣ್ಣು ಮಕ್ಕಳ ಹೆಸರೇ ನೆನಪಿಲ್ಲ!

ಗಂಡು ಮಗುವಿನ ವ್ಯಾಮೋಹ, ಹೆಣ್ಣು ಮಕ್ಕಳ ಕಡೆಗಣನೆ

 ಇದು ಕೇವಲ ಬಪ್ಪನ್ ಗ್ರಾಮದ ಒಂದು ಕುಟುಂಬದ ಕಥೆಯಲ್ಲ, ಬದಲಿಗೆ ಸಮಾಜದಲ್ಲಿ ಇನ್ನೂ ಜೀವಂತವಾಗಿರುವ ಲಿಂಗ ತಾರತಮ್ಯದ ದ್ಯೋತಕ. ಮಗನಿಗಾಗಿ ಸತತವಾಗಿ ಹತ್ತು ಮಕ್ಕಳನ್ನು ಪಡೆಯುವ ಮೂಲಕ ಗುರ್ಜಂತ ಸಿಂಗ್ ತನ್ನ ಪತ್ನಿಯ ಆರೋಗ್ಯ ಮತ್ತು ಈಗಾಗಲೇ ಜನಿಸಿರುವ ಹತ್ತು ಹೆಣ್ಣು ಮಕ್ಕಳ ಭವಿಷ್ಯದ ಬಗ್ಗೆ ಕಿಂಚಿತ್ತೂ ಯೋಚಿಸಿಲ್ಲ ಎಂಬುದು ಇಲ್ಲಿ ಸ್ಪಷ್ಟವಾಗುತ್ತದೆ. ಗಂಡು ಮಗುವೇ ವಂಶೋದ್ಧಾರಕ ಎಂಬ ಹಳೆಯ ಕಾಲದ ಹಠಮಾರಿ ಮನಸ್ಥಿತಿ ಮಾತ್ರ ಇಲ್ಲಿ ಎದ್ದು ಕಾಣುತ್ತಿದೆ.

ಮಾಧ್ಯಮ ಪ್ರತಿನಿಧಿಯೊಬ್ಬರು ಹೆಣ್ಣುಮಕ್ಕಳ ಹೆಸರು ಕೇಳಿದಾಗ, ತನ್ನ ಹತ್ತು ಹೆಣ್ಣು ಮಕ್ಕಳ ಹೆಸರನ್ನು ನೆನಪಿಸಿಕೊಳ್ಳಲು ಪರದಾಡುವ ಈ ತಂದೆಯ ನಡೆ, ಹೆಣ್ಣು ಮಕ್ಕಳ ಬಗ್ಗೆ ಅವರಿಗಿರುವ ನಿರ್ಲಕ್ಷ್ಯವನ್ನು ತೋರಿಸುತ್ತದೆ. ತನ್ನ ಸ್ವಂತ ಹೆಣ್ಣು ಮಕ್ಕಳ ಹೆಸರುಗಳನ್ನು ನೆನಪಿಸಿಕೊಳ್ಳಲು ಪರದಾಡುವ ತಂದೆಯು, ಮಗನ ವಿಷಯಕ್ಕೆ ಬಂದಾಗ ಮಾತ್ರ ಸಂಭ್ರಮ ವ್ಯಕ್ತಪಡಿಸುತ್ತಾನೆ. ಇದು ಆ ಹೆಣ್ಣು ಮಕ್ಕಳ ಮಾನಸಿಕ ಅಸ್ತಿತ್ವಕ್ಕೆ ಮಾಡಿದ ಅವಮಾನ. ಒಬ್ಬ ತಂದೆಗೆ ತನ್ನ ಹತ್ತು ಮಕ್ಕಳ ಹೆಸರೇ ನೆನಪಿಲ್ಲ ಎಂದರೆ, ಆ ಹೆಣ್ಣು ಮಕ್ಕಳು ಆ ಮನೆಯಲ್ಲಿ ಕೇವಲ ಸಂಖ್ಯೆಗಳಾಗಿ ಬದುಕುತ್ತಿದ್ದಾರೆಯೇ? ಮಗುವಿನ ವ್ಯಾಮೋಹವು ಮನೆಯಲ್ಲಿರುವ ಹೆಣ್ಣು ಮಕ್ಕಳ ಅಸ್ತಿತ್ವವನ್ನೇ ಅಳಿಸಿ ಹಾಕುವಂತಿದೆ ಎಂದು ಹಲವಾರು ಜನ ಸಾಮಾಜಿಕ ಜಾಲತಾಣಗಳಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ.

ಸಾಮಾಜಿಕ ಹೊಣೆಗಾರಿಕೆ ಎಲ್ಲಿ?

ಈ ಕಾಲದಲ್ಲೂ ಗಂಡು ಮಗುವಿಗಾಗಿ ಹನ್ನೊಂದು ಮಕ್ಕಳನ್ನು ಪಡೆಯುವುದು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಎಷ್ಟು ಸರಿ? ಹನ್ನೊಂದು ಮಕ್ಕಳನ್ನು ಸಾಕಿ, ಸಲಹಿ, ಅವರಿಗೆ ಉತ್ತಮ ಶಿಕ್ಷಣ ನೀಡುವುದು ಇಂದಿನ ದುಬಾರಿ ದಿನಗಳಲ್ಲಿ ಅಸಾಧ್ಯದ ಮಾತು. ಇಂತಹ ದೊಡ್ಡ ಕುಟುಂಬಗಳಲ್ಲಿ ಹೆಣ್ಣು ಮಕ್ಕಳು ಸಾಮಾನ್ಯವಾಗಿ ಶಿಕ್ಷಣ ಮತ್ತು ಉತ್ತಮ ಅವಕಾಶಗಳಿಂದ ವಂಚಿತರಾಗುತ್ತಾರೆ. ಕೇವಲ ಮಗನಿಗಾಗಿ ಇಡೀ ಕುಟುಂಬದ ಭವಿಷ್ಯವನ್ನೇ ಒತ್ತೆ ಇಡುವುದು ಎಷ್ಟು ನ್ಯಾಯ ಎಂಬ ಚರ್ಚೆ ಈಗ ಶುರುವಾಗಿದೆ.

ಈ ಘಟನೆಯು ಮೋದಿ ಸರ್ಕಾರದ ‘ಬೇಟಿ ಬಚಾವೋ, ಬೇಟಿ ಪಢಾವೋ’ ನಂತಹ ಅಭಿಯಾನಗಳ ನಡುವೆಯೂ ಸಮಾಜದ ಒಂದು ವರ್ಗ ಇನ್ನೂ ಎಂತಹ ಸಂಕುಚಿತ ಆಲೋಚನೆಯಲ್ಲಿದೆ ಎಂಬುದನ್ನು ನೆನಪಿಸುತ್ತಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!