Thursday, March 26, 2026
Homeಆಧ್ಯಾತ್ಮಅಯೋಧ್ಯೆ ರಾಮಮಂದಿರ ಪ್ರಾಣ ಪ್ರತಿಷ್ಠೆಯ ಎರಡನೇ ವರ್ಷದ ಸಂಭ್ರಮ: ಅನ್ನಪೂರ್ಣಾ ದೇಗುಲದ ಮೇಲೆ ರಕ್ಷಣಾ ಸಚಿವರಿಂದ...

ಅಯೋಧ್ಯೆ ರಾಮಮಂದಿರ ಪ್ರಾಣ ಪ್ರತಿಷ್ಠೆಯ ಎರಡನೇ ವರ್ಷದ ಸಂಭ್ರಮ: ಅನ್ನಪೂರ್ಣಾ ದೇಗುಲದ ಮೇಲೆ ರಕ್ಷಣಾ ಸಚಿವರಿಂದ ಧ್ವಜಾರೋಹಣ

ಅಯೋಧ್ಯೆಯ ಭವ್ಯ ಶ್ರೀರಾಮ ಮಂದಿರದಲ್ಲಿ ರಾಮನ ಪ್ರಾಣ ಪ್ರತಿಷ್ಠಾಪನೆಯಾಗಿ ಇಂದಿಗೆ ಯಶಸ್ವಿ ಎರಡು ವರ್ಷ ಪೂರೈಸಿದೆ. ಈ ಐತಿಹಾಸಿಕ ‘ಪ್ರಾಣ ಪ್ರತಿಷ್ಠಾ ದ್ವಾದಶಿ’ ವಾರ್ಷಿಕೋತ್ಸವದ ಅಂಗವಾಗಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಅಯೋಧ್ಯೆಗೆ ಭೇಟಿ ನೀಡಿ, ಅನ್ನಪೂರ್ಣಾ ದೇವಾಲಯದ ಮೇಲೆ ಕೇಸರಿ ಧ್ವಜಾರೋಹಣ ನೆರವೇರಿಸುವ ಮೂಲಕ ಸಂಭ್ರಮಕ್ಕೆ ಚಾಲನೆ ನೀಡಿದರು.

ಪ್ರಾಣ ಪ್ರತಿಷ್ಠಾ ದ್ವಾದಶಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ರಾಜನಾಥ್ ಸಿಂಗ್ ಅವರಿಗೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಾಥ್ ನೀಡಿದರು. ಉಭಯ ನಾಯಕರು ರಾಮ ಮಂದಿರಕ್ಕೆ ತೆರಳುವ ಮುನ್ನ ಪವಿತ್ರ ಹನುಮಾನ್‌ಗಢಿ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ರಾಮ ಮಂದಿರದಲ್ಲಿ ರಾಮ್ ಲಲ್ಲಾ ವಿಗ್ರಹದ ಮುಂದೆ ಪ್ರಾರ್ಥನೆ ಸಲ್ಲಿಸಿ ದೇಶದ ಕಲ್ಯಾಣಕ್ಕಾಗಿ ಆಶೀರ್ವಾದ ಬೇಡಿದರು.

ಈ ವಾರ್ಷಿಕೋತ್ಸವದ ಆಚರಣೆಗಳು ವಾರದ ಆರಂಭದಿಂದಲೇ ಆರಂಭವಾಗಿದ್ದು, ಶುಕ್ರವಾರದವರೆಗೆ ವಿವಿಧ ಧಾರ್ಮಿಕ ವಿಧಿವಿಧಾನಗಳು ನಡೆಯಲಿವೆ. ಈ ವಿಶೇಷ ಸಂದರ್ಭದಲ್ಲಿ ರಾಮಲಲ್ಲಾನ ದರ್ಶನಕ್ಕಾಗಿ ದೇಶಾದ್ಯಂತ ಸುಮಾರು 5 ರಿಂದ 6 ಲಕ್ಷ ಭಕ್ತರು ಅಯೋಧ್ಯೆಗೆ ಆಗಮಿಸುವ ನಿರೀಕ್ಷೆಯಿದೆ. ಈ ಹಿನ್ನೆಲೆಯಲ್ಲಿ ನಗರವನ್ನು 5 ವಲಯಗಳಾಗಿ ವಿಂಗಡಿಸಿ, ಸುಮಾರು 3,000ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಹಾಗೂ ಪ್ಯಾರಾ ಮಿಲಿಟರಿ ಪಡೆಗಳನ್ನು ಭದ್ರತೆಗೆ ನಿಯೋಜಿಸಲಾಗಿದೆ. ಡ್ರೋನ್ ಮತ್ತು ಆಂಟಿ-ಡ್ರೋನ್ ವ್ಯವಸ್ಥೆಯ ಮೂಲಕ ಹದ್ದಿನ ಕಣ್ಣಿಡಲಾಗಿದೆ.

ಧ್ವಜಾರೋಹಣದ ನಂತರ ಮಾತನಾಡಿದ ರಾಜನಾಥ್ ಸಿಂಗ್, “500 ವರ್ಷಗಳ ಸುದೀರ್ಘ ಕಾಯುವಿಕೆಯ ನಂತರ ರಾಮಲಲ್ಲಾ ಭವ್ಯ ಮಂದಿರದಲ್ಲಿ ನೆಲೆಸಿದ್ದಾನೆ. ರಾಮ ಮಂದಿರ ನಿರ್ಮಾಣವು ವಿಶ್ವದ ಶ್ರೇಷ್ಠ ನಿರೂಪಣೆಗಳಲ್ಲಿ ಒಂದಾಗಿದ್ದು, ಇದು ಕೇವಲ ಗುಡಿಯಲ್ಲ, ಭಾರತದ ಪ್ರಜ್ಞೆಯ ಸಂಕೇತ” ಎಂದು ಬಣ್ಣಿಸಿದರು. ಸಿಎಂ ಯೋಗಿ ಆದಿತ್ಯನಾಥ್ ಮಾತನಾಡಿ, ಸನಾತನ ಧರ್ಮದ ಶಕ್ತಿಯನ್ನು ಯಾರೂ ಹತ್ತಿಕ್ಕಲು ಸಾಧ್ಯವಿಲ್ಲ ಎಂದು ಪ್ರತಿಪಾದಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!