Kota Srinivas Poojary : ಚಿಕ್ಕಮಗಳೂರು: ಲೋಕಸಭಾ ಚುನಾವಣಾ ಹಿನ್ನೆಲೆ ಎಲ್ಲೆಡೆ ಅಬ್ಬರದ ಪ್ರಚಾರ ನಡೆಯುತ್ತಿದೆ. ಇನ್ನು ತೀವ್ರ ಕುತೂಹಲ ಮೂಡಿಸಿರುವ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕೋಟಾ ಶ್ರೀನಿವಾಸ್ ಪೂಜಾರಿ ಅಖಾಡಕ್ಕಿಳಿದಿದ್ದು ಇಂದು ಚಿಕ್ಕಮಗಳೂರಿನಲ್ಲಿ ಪ್ರಚಾರ ಕಾರ್ಯ ಕೈಗೊಂಡಿದ್ದಾರೆ. ಪ್ರಚಾರದ ವೇಳೆ ಕೋಟಾ ಶ್ರೀನಿವಾಸ್ ಪೂಜಾರಿಯವರಿಗೆ ಚುರುಮುರಿ ವ್ಯಾಪಾರಿಯೊಬ್ಬರು ಚುನಾವಣೆಯ ಖರ್ಚಿಗೆಂದು ದೇಣಿಗೆ ನೀಡಿದ್ದಾರೆ.
ಹೌದು ಕೋಟಾ ಶ್ರೀನಿವಾಸ್ ಪೂಜಾರಿ ಇಂದು ಬೆಳಿಗ್ಗೆಯಿಂದ ಚಿಕ್ಕಮಗಳೂರು ನಗರದಲ್ಲಿ ಚುನಾವಣಾ ಪ್ರಚಾರ ಕೈಗೊಂಡು ಮತ ಯಾಚಿಸುತ್ತಿದ್ದಾರೆ. ಈ ವೇಳೆ ಚಿಕ್ಕಮಗಳೂರು ಹೊರವಲಯದ ತೇಗೂರು ಸರ್ಕಲ್ ನಲ್ಲಿ ಮತಯಾಚಿಸುವ ವೇಳೆ ಚುರುಮುರಿ ವ್ಯಾಪಾರಿ ಲೋಕೇಶ್ ಬಾಬು ಎಂಬುವವರು 25 ಸಾವಿರ ಹಣವನ್ನ ಶ್ರೀನಿವಾಸ್ ಪೂಜಾರಿಯವರಿಗೆ ಚುನಾವಣಾ ಖರ್ಚಿಗಾಗಿ ನೀಡಿ, ಗೆಲ್ಲುವಂತೆ ಶುಭ ಹಾರೈಸಿದ್ದಾರೆ. ತೇಗೂರು ನಿವಾಸಿಯಾಗಿರುವ ಲೋಕೇಶ್ ಬಿಜೆಪಿ ಸಕ್ರಿಯ ಕಾರ್ಯಕರ್ತರಾಗಿ ಗುರುತಿಸಿಕೊಂಡಿದ್ದಾರೆ. ಚುರುಮುರಿ ವ್ಯಾಪಾರ ಮಾಡಿ ಬಂದ ಹಣದಲ್ಲಿ ಕೋಟಾಗೆ ದೇಣಿಗೆ ನೀಡುವ ಮೂಲಕ ಗಮನ ಸೆಳೆದಿದ್ದಾರೆ.
