ಶೃಂಗೇರಿ: ರೈತರು, ಕಾರ್ಮಿಕರ, ಶಿಕ್ಷಣ, ಆರೋಗ್ಯ ವಿಷಯದಲ್ಲಿ ಕಾರ್ಯ ನಿರ್ವಹಿಸುವ ಸಂಘಟನೆಗಳನ್ನು ಒಂದು ಸಿದ್ದಾಂತದ ಅಡಿಯಲ್ಲಿ ಒಗ್ಗೂಡಿಸುವ, ಆ ಮೂಲಕ ರಾಜಕೀಯ ಪರಿವರ್ತನೆ ತರುವ ಪ್ರಯತ್ನ ಮಾಡಲಾಗುತ್ತಿದೆ. ವ್ಯವಸ್ಥೆಗೆ ಪರ್ಯಾಯ ರಾಜಕಾರಣ ಬೇಕು. ಈ ಬಗ್ಗೆ ಜಾಗೃತಿ ಮೂಡಿಸುವ ಕೆಲಸವಾಗಬೇಕು ಎಂದು ನಟ ಚೇತನ್ ಅಹಿಂಸಾ ಹೇಳಿದರು.
ಶೃಂಗೇರಿಯ ಶಾರದಾ ನಗರದಲ್ಲಿ ಕರ್ನಾಟಕ ಜನಶಕ್ತಿ ಆಯೋಜಿಸಿದ್ದ ಸಮ ಸಮಾಜ ನಿರ್ಮಾಣ ಕುರಿತ ಸಭೆಯಲ್ಲಿ ಅವರು ಮಾತನಾಡಿದರು.
ಪರಿಸರ ಎಂಬುದು ಪ್ರಾಣಿ, ಪಕ್ಷಿಗಳಿಗೆ ಸೀಮಿತವಾಗಿರದೆ ಪರಿವರ್ತನ ಪರಿಸರವಾದ ಆಗಬೇಕು. ಪರಿವರ್ತನೆಯ ಪರಿಸರ ಕಾಳಜಿಯನ್ನು ಜನರಲ್ಲಿ ಬಿತ್ತುವ ಕಾರ್ಯ ಮಾಡಬೇಕು. ಈ ಮೂಲಕ ಪರಿಸರದ ಮೇಲೆ ನಡೆಯುತ್ತಿರುವ ದಬ್ಬಾಳಿಕೆಗೆ ಕಡಿವಾಣ ಹಾಕಬೇಕು. ಪರಿಸರ ರಕ್ಷಣೆ, ಅಭಿವೃದ್ಧಿ ಮತ್ತು ಮುಂದಿನ ತಲೆಮಾರಿಗೆ ಹೇಗೆ ಉಳಿಸಿಕೊಡಬೇಕು ಎಂಬುದರ ಬಗ್ಗೆ ಚಿಂತನೆ ಮಾಡಬೇಕು. ಸಮಾಜದಲ್ಲಿನ ಅಸಮಾನತೆ ಪರಿಸರದ ಮೇಲೆ ದೊಡ್ಡ ಪರಿಣಾಮ ಬೀರುತ್ತಿದೆ ಎಂದರು.
ಪರಿಸರವಾದಿ ಕಲ್ಕುಳಿ ವಿಠಲ್ ಹೆಗ್ಡೆ ಮಾತನಾಡಿ, ರಾಜಕಾರಣಿಗಳು ಜನರ ಸೇವೆಯ ಬದಲು ತಮ್ಮ ವೈಯಕ್ತಿಕ ಆದಾಯ ಹೆಚ್ಚಿಸಿಕೊಳ್ಳುವಲ್ಲಿ ಗಮನ ಹರಿಸಿದ್ದಾರೆ. ಪರಿಸರದ ಮೇಲೆ ಮಾನವನ ಒತ್ತಡ ಹೆಚ್ಚಾಗುತ್ತಿದೆ. ಇದರ ಪರಿಣಾಮವನ್ನು ನಾವು ಎದುರಿಸುತ್ತಿದ್ದೇವೆ. ಪರಿಸರದಲ್ಲಿ ಆಗುತ್ತಿರುವ ಬದಲಾವಣೆಗಳು ಇಡೀ ಜೀವಸಂಕುಲಕ್ಕೆ ಅಪಾಯ ತಂದೊಡ್ಡುತ್ತಿವೆ ಎಂದರು.
ಕರ್ನಾಟಕ ಜನಶಕ್ತಿಯ ಸುಕೇಶ್ ಗಡಿಕಲ್ಲು, ವೆಂಕಟೇಶ್, ಕೌಳಿ ರಾಮು, ಮಣಿ, ಶೇಖರ, ಕರುಣಾಕರ, ಮನೋಜ್, ಗುರುಪ್ರಸಾದ್ ಭಾಗವಹಿಸಿದ್ದರು.
