ಕಡೂರು: ಸ್ನೇಹಿತರೊಂದಿಗೆ ಕೆರೆಗೆ ಈಜಲು ತೆರಳಿದ್ದ ಅಪ್ರಾಪ್ತ ಬಾಲಕನೋರ್ವ ಕೆರೆಯಲ್ಲಿ ಮುಳುಗಿ ದಾರುಣ ಅಂತ್ಯ ಕಂಡಿರುವ ಘಟನೆ ಕಡೂರು ತಾಲೂಕಿನ ಅಯ್ಯನಕೆರೆಯಲ್ಲಿ ನಡೆದಿದೆ.
ಮೃತ ಬಾಲಕನನ್ನು ಮಲ್ಲೇನಹಳ್ಳಿ ಸಮೀಪದ ಹೊಸಪೇಟೆ ಗ್ರಾಮದ ರುದ್ರೇಶ್ (16) ಎಂದು ಗುರುತಿಸಲಾಗಿದೆ. ನಾಲ್ವರು ಸ್ನೇಹಿತರೊಂದಿಗೆ ಈಜಲು ಕೆರೆಗೆ ತೆರಳಿದ್ದ ರುದ್ರೇಶ್ಗೆ ಈಜುಬರದೆ ನೀರಿನಡಿಯೇ ಸಿಲುಕಿ ಜೀವ ಕಳೆದುಕೊಂಡಿದ್ದಾನೆ. ಜೊತೆಯಿದ್ದ ಮೂವರು ಸ್ನೇಹಿತರು ಸುರಕ್ಷಿತವಾಗಿ ದಡ ಸೇರಿದ್ದಾರೆ.
ಈ ಘಟನೆ ಗಮನಿಸಿದ ಪ್ರವಾಸಿ ಮಿತ್ರರು ತಕ್ಷಣವೇ ಸಖರಾಯಪಟ್ಟಣ ಪೊಲೀಸ್ ಠಾಣೆ ಹಾಗೂ ಅಗ್ನಿಶಾಮಕ ಸಿಬ್ಬಂದಿಗಳಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಸ್ಥಳಕ್ಕೆ ಆಗಮಿಸಿದ ಕಡೂರು ಅಗ್ನಿಶಾಮಕ ದಳದ ಸಿಬ್ಬಂದಿಗಳು ಶೋಧ ಕಾರ್ಯಾಚರಣೆ ನಡೆಸಿ ಮೃತದೇಹವನ್ನು ಕೆರೆಯಿಂದ ಹೊರತೆಗೆದಿದ್ದಾರೆ.
ಈ ಘಟನೆ ಸಖರಾಯಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ದಸರಾ ರಜೆಯ ಸಂತಸದ ನಡುವೆ ಈ ದುರ್ಘಟನೆ ಕುಟುಂಬ ಹಾಗೂ ಸ್ಥಳೀಯರಲ್ಲಿ ವಿಷಾದ ಮೂಡಿಸಿದೆ.
