ಚಿಕ್ಕಮಗಳೂರು: ನಗರದ ಸುಭಾಷ್ ಚಂದ್ರ ಬೋಸ್ ಜಿಲ್ಲಾ ಆಟದ ಮೈದಾನದಲ್ಲಿ ಸೋಮವಾರ ರಾಜ್ಯ ಪ್ರಶಸ್ತಿ ವಿಜೇತೆ ಗೌರಮ್ಮ ಬಸವೇಗೌಡ ಅವರ ಸ್ಮರಣಾರ್ಥ ರಾಣಾ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಆರಂಭವಾದ ಚಿಕ್ಕಮಗಳೂರು ಪ್ರೀಮಿಯರ್ ಲೀಗ್ವೈಟ್ ಲೆದರ್ಬಾಲ್ ಕ್ರಿಕೆಟ್ ಪಂದ್ಯಾವಳಿಗೆ ಶಾಸಕ ಎಚ್.ಡಿ.ತಮ್ಮಯ್ಯ ಚಾಲನೆ ನೀಡಿದರು

ನಂತರ ಮಾತನಾಡಿದ ಶಾಸಕ ಎಚ್.ಡಿ.ತಮ್ಮಯ್ಯ ನಗರ ಹೊರವಲಯದ ಇಂದಾವರದಲ್ಲಿ ಸಿಡಿಎ ನಿರ್ಮಿಸುತ್ತಿರುವ ಹೊಸ ಲೇಔಟ್ನ 12 ಎಕರೆ ಜಾಗವನ್ನು ನೂತನ ಕ್ರಿಕೆಟ್ ಕ್ರೀಡಾಂಗಣ ನಿರ್ಮಿಸಲು ಮೀಸಲಿರಿಸಲಾಗಿದೆ ಎಂದು ಹೇಳಿದರು.
ಕಲ್ಯಾಣ ನಗರದಲ್ಲಿ ಕ್ರಿಕೆಟ್ ಮೈದಾನಕ್ಕೆ ಎಂದು ಜಾಗ ಗುರುತಿಸಲಾಗಿತ್ತು. ಆದರೆ, ಅಲ್ಲಿ ಫುಟ್ಬಾಲ್ ಇಂಡೋರ್ ಸ್ಟೇಡಿಯಂ ಆಯಿತು. ನಂತರ ಕರ್ತಿಕೆರೆಯಲ್ಲಿ ಜಾಗ ಗುರುತಿಸಲಾಗಿತ್ತು, ಸ್ಥಳೀಯರ ವಿರೋಧದಿಂದ ಅದೂ ಆಗಲಿಲ್ಲ. ನಾನು ಶಾಸಕನಾದ ನಂತರ ಇಂದಾವರದಲ್ಲಿ ಸಿಡಿಎ ನಿರ್ಮಿಸುತ್ತಿರುವ ಹೊಸ ಲೇಔಟ್ನಲ್ಲಿ 12 ಎಕರೆ ಜಾಗವನ್ನು ಹೊಸ ಕ್ರಿಕೆಟ್ ಮೈದಾನ ನಿರ್ಮಿಸಲು ಮೀಸಲಿಟ್ಟಿದ್ದೇವೆ. ಲೇಔಟ್ ಆದ ನಂತರ ಕೆಎಸ್ಸಿಎ ಅವರಿಗೆ ಆ ಜಾಗವನ್ನು ಹಸ್ತಾಂತರಿಸಲಾಗುವುದು ಎಂದು ಹೇಳಿದರು.
ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಟಿ.ರಾಜಶೇಖರ್ ಮಾತನಾಡಿ ಯುವಕರು ವಿದ್ಯಾಭ್ಯಾಸದ ಜೊತೆಗೆ ಕ್ರಿಕೇಟ್ ಕ್ರೀಡೆಯಲ್ಲೂ ಸಾಧನೆ ಮಾಡಲು ಉತ್ತಮ ಅವಕಾಶಗಳಿವೆ. ಕ್ರಿಕೇಟ್ನಲ್ಲಿ ನಮ್ಮ ರಾಜ್ಯದ ಅನೇಕರು ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಸೌಭಾಗ್ಯ ಸಾಮಿಲ್ನ ಬಿ.ಎಂ.ಶರತ್, ರಾಣಾ ಸ್ಪೋಟ್ಸ್ಕ್ಲಬ್ನ ಹಿರಿಯ ಆಟಗಾರ ಫ್ರಾನ್ಸಿಸ್, ಕೆ.ಎಸ್.ಸಿ.ಎ ಜೋನಲ್ ಕಮಿಟಿ ಮೆಂಬರ್ ಶಶಿಕುಮಾರ್, ಮನೋಹರ್, ರಿನೇಶ್, ಶಂಕರ್, ಆಯೋಜಕರಾದ ಥಾಮ್ಸನ್ ಮತ್ತಿತರರಿದ್ದರು. ನಟರಾಜ್ ಸ್ವಾಗತಿಸಿ ವಂದಿಸಿದರು.
