ಪಡುಬಿದ್ರಿ: ಎಲ್ಲೆಂದರಲ್ಲಿ ತ್ಯಾಜ್ಯ ಎಸೆದು ಹೋಗುವವರ ಮೇಲೆ ಸ್ಥಳೀಯ ಆಡಳಿತ ನಿಗಾ ವಹಿಸಲಾರಂಭಿಸಿದ್ದು, ಅಂತಹವರ ಮೇಲೆ ಶಿಸ್ತುಕ್ರಮ ಕೈಗೊಳ್ಳುವ ಪ್ರಕ್ರಿಯೆ ಹೆಚ್ಚುತ್ತಿದೆ. ಪಡುಬಿದ್ರಿ ಸಮೀಪ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಮೀನಿನ ತ್ಯಾಜ್ಯ ನೀರನ್ನು ಚೆಲ್ಲಿದ ವಾಹನವೊಂದರ ಚಾಲಕನಿಗೆ ತೆಂಕ ಗ್ರಾಮ ಪಂಚಾಯತ್ 5 ಸಾವಿರ ರೂ. ದಂಡ ವಿಧಿಸಿ ಎಚ್ಚರಿಕೆ ನೀಡಿದೆ.
ಅಲ್ಲಿ ತ್ಯಾಜ್ಯ ಸುರಿಯದಂತೆ ಎಚ್ಚರಿಕೆ ಫಲಕ ಅಳವಡಿಸಿದ್ದರೂ ಟೆಂಪೋ ಚಾಲಕನು ಅದರ ಪಕ್ಕದಲ್ಲೇ ತ್ಯಾಜ್ಯ ನೀರನ್ನು ಚೆಲ್ಲುವ ಮೂಲಕ ಪಂಚಾಯತ್ಗೆ ಸವಾಲೊಡ್ಡಿದ್ದನು. ಇದನ್ನು ಗಮನಿಸಿದ ಸಾರ್ವಜನಿಕರು ಗ್ರಾ.ಪಂ.ಗೆ ಮಾಹಿತಿ ನೀಡಿದ್ದು ತತ್ಕ್ಷಣ ಧಾವಿಸಿ ಬಂದ ಪಂಚಾಯತ್ ಸದಸ್ಯರು ಪಡುಬಿದ್ರಿ ಪೊಲೀಸರ ಸಹಾಯ ಪಡೆದು ದಂಡವನ್ನು ಸಂಗ್ರಹಿಸಿದರು.
ಆರೋಪಿ ಚಾಲಕನು ಬಂಟ್ವಾಳ ಕಡೆಯವನೆಂದು ತಿಳಿದು ಬಂದಿದೆ. ಪೊಲೀಸರ ಬಳಿ ತನ್ನ ಹೆಸರನ್ನು ಲತೀಫ್ ಎಂದು ಹೇಳಿಕೊಂಡರೆ ಪಂಚಾಯತ್ಗೆ ದಂಡದ ಪಾವತಿಸುವಾಗ ಸುಹೇನ್ ಎಂಬ ಹೆಸರನ್ನು ನೀಡಿದ್ದಾನೆ.
ಇದೇ ರೀತಿ ಕೊಪ್ಪಲಂಗಡಿಯ ಹೆದ್ದಾರಿ ಪಕ್ಕದಲ್ಲಿ ತ್ಯಾಜ್ಯ ಸುರಿದು ಹೋದ ಆಂಧ್ರಪ್ರದೇಶದ ಲಾರಿಯನ್ನು ಬೆನ್ನುಹತ್ತಿ ಮರಳಿ ಬರುವಂತೆ ಮಾಡಿ ಅವರಿಂದ ತ್ಯಾಜ್ಯವನ್ನು ಹೆಕ್ಕಿಸಿದ್ದಲ್ಲದೆ 2,000 ರೂ. ದಂಡ ವಿಧಿಸಿದ್ದ ಘಟನೆ ಡಿ. 1ರಂದು ಕಾಪು ಪುರಸಭೆ ವತಿಯಿಂದ ನಡೆದಿತ್ತು.
