ಚಿಕ್ಕಮಗಳೂರು: ಬೈಕ್ ಹಾಗು ಕಾರುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಬಾಲಕಿಯೋರ್ವಳು ಮೃತಪಟ್ಟು, ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ತಾಲೂಕಿನ ಕಟ್ಟೆ ತಿಮ್ಮನಹಳ್ಳಿ ಕ್ರಾಸ್ ಬಳಿ ಸಂಭವಿಸಿದೆ.
ಚಿಕ್ಕಮಗಳೂರು ಹೊರವಲಯದ ಅಂಬಳೆ ಗ್ರಾಮದ ಲಹರಿ(6) ಮೃತ ಬಾಲಕಿ. ಮೃತ ಬಾಲಕಿಯ ತಂದೆ ಪುನೀತ್(37), ತಾಯಿ ಚೈತ್ರಾ(34) ಹಾಗೂ ಅಕ್ಕ ಸಿರಿ(8) ಗಂಭೀರವಾಗಿ ಗಾಯಗೊಂಡವರು. ಗಾಯಾಳುಗಳನ್ನು ಚಿಕ್ಕಮಗಳೂರು ಅರಳಗುಪ್ಪೆ ಮಲ್ಲೇಗೌಡ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ.
ಪುನೀತ್ ಅವರು ಪತ್ನಿ ಹಾಗೂ ಇಬ್ಬರು ಪುತ್ರಿಯರ ಜೊತೆ ಬೈರಂಬುದಿ ಗ್ರಾಮದಿಂದ ಅಂಬಳೆಗೆ ಬೈಕ್ ನಲ್ಲಿ ಬರುವ ವೇಳೆ ಕಟ್ಟೆ ತಿಮ್ಮನಹಳ್ಳಿ ಕ್ರಾಸ್ ಬಳಿ ವೇಗವಾಗಿ ಬಂದ ಕಾರು ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ದುರ್ಘಟನೆ ಸಂಭವಿಸಿದೆ.
ಈ ಸಂಬಂಧ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
