ಕಳಸ: ತಾಲೂಕಿನ ಹೊರನಾಡು, ಇಡಕಿಣಿ ಇನ್ನಿತರ ಕೆಲವು ಗ್ರಾಮಗಳಲ್ಲಿ ಕೆಲವು ಸರ್ವೆ ನಂಬರುಗಳಲ್ಲಿ ಇರುವ ಕಂದಾಯ ಭೂಮಿಯನ್ನು ಪರಿಭಾವಿತ ಅರಣ್ಯದ ಹೆಸರಿನಲ್ಲಿ ಅರಣ್ಯಕ್ಕೆ ವಹಿಸುವ ಪ್ರಸ್ತಾವನೆ ಆ ಪ್ರಯುಕ್ತ ಈಗಾಗಲೇ ಆಯಾಯ ಗ್ರಾಮದ ಕೆಲವು ಸರ್ವೆ ನಂಬರುಗಳಲ್ಲಿ ಕೃಷಿ ಮಾಡಿಕೊಂಡು ವಾಸ ಮಾಡುತ್ತಿರುವ ಕೆಲವಷ್ಟು ರೈತರಿಗೆ ತಮ್ಮ ಅನುಭವದಲ್ಲಿರುವ ಪ್ರದೇಶದ ಪೂರಕವಾಗಿರುವ ದಾಖಲಾತಿಗಳೊಂದಿಗೆ ಅಕ್ಷೇಪಣೆಗಳಿದ್ದರೆ ಲಿಖಿತ ಮನವಿಯನ್ನು ನೀಡುವಂತೆ ಕಳಸ ವಲಯ ಅರಣ್ಯಾಧಿಕಾರಿಗಳು 25-11-2025ಕ್ಕೆ ಖುದ್ದು ಹಾಜರಾಗಿ ವಿಚಾರಣೆಗೆ ಒಳಪಡುವಂತೆ ನೋಟೀಸ್ ನೀಡಿದ್ದಾರೆ ಎಂದು ರೈತ ಮುಖಂಡ ಸುರೇಶ್ ಭಟ್ ತಿಳಿಸಿದರು.
ಹಾಗೆಯೇ, ಈ ಹಿಂದೆ 2-3 ಬಾರಿ ಇದೇ ರೀತಿ ನೋಟೀಸನ್ನು ಕೊಟ್ಟಿದ್ದಾರೆ. ಮೊದಲ ಬಾರಿ ಕಡೂರಿನಲ್ಲಿರುವ ವ್ಯವಸ್ಥಾಪನಾಧಿಕಾರಿ ಕಛೇರಿಗೆ ದಾಖಲಾತಿ ಹಾಗೂ ಆಕ್ಷೇಪಣೆಯನ್ನು ಸಲ್ಲಿಸುವಂತೆ ತಿಳಿಸಲಾಗಿತ್ತು. ಕಳಸದಲ್ಲೂ ಆಕ್ಷೇಪಣೆಯನ್ನು ಪಡೆದುಕೊಂಡಿದ್ದರು, ನಾವುಗಳು ಪ್ರತಿಬಾರಿಯೂ ಆಕ್ಷೇಪಣೆಯನ್ನು ಸಲ್ಲಿಸಿದರು ಕಳಕೋಡು ಗ್ರಾಮದಲ್ಲಿ ಸ. ನಂ. 20, 55, 70 ಮತ್ತು 80ರಲ್ಲಿ ಒಟ್ಟು 550.19 ಎಕರೆ ಪ್ರದೇಶವನ್ನು ಮೀಸಲು ಅರಣ್ಯವನ್ನಾಗಿ ಸಂರಚಿಸುವ ಪ್ರಸ್ತಾವನೆ ಇರುತ್ತದೆ. ಸ. ನಂ. 20ರಲ್ಲಿ 123.30 ಎಕರೆ ಕಂದಾಯ, 100 ಎಕರೆ ಅರಣ್ಯ, ಸ. ನಂ. 70ರಲ್ಲಿ 129.00 ಕಂದಾಯ, 474 ಎಕರೆ ಅರಣ್ಯ. ಸ. ನಂ. 80ರಲ್ಲಿ 407,06 ಎಕರೆ ಕಂದಾಯ, 175 ಎಕರೆ ಅರಣ್ಯ, ಸ. ನಂ. 55ರಲ್ಲಿ ಇದು ಕಾಫಿ ಖರಾಬಾಗಿದ್ದು, 49.38 ಎಕರೆ ಇರುತ್ತದೆ. ಈ ಸರ್ವೆ ನಂಬರುಗಳಲ್ಲಿ ಒಟ್ಟು 709.34 ಗೋಮಾಳ ಭೂಮಿ ಇದ್ದು, 749 ಅರಣ್ಯವಾಗಿರುತ್ತದೆ. ರೈತರು ತಲ ತಲಾಂತರ ವರ್ಷಗಳಿಂದ ಕೃಷಿ ಮಾಡಿಕೊಂಡು ಬದುಕು ಕಟ್ಟಿಕೊಂಡಿದ್ದಾರೆ ಎಂದು ಕಳಕೋಡು ಗ್ರಾಮದ ರೈತ ನವೀನ್ ಮಾತಾಡಿದರು.
ಹೊರನಾಡು ಗ್ರಾಮದಲ್ಲೂ ಸ. ನಂ. 62, 65, 76, 81, 90, 98, 175, 229 ಮತ್ತು 166ರಲ್ಲಿ ಒಟ್ಟು 1299.39 ಎಕರೆ ಪ್ರದೇಶವನ್ನು ಅನ್ನಪೂರ್ಣೇಶ್ವರಿ ಮೀಸಲು ಅರಣ್ಯವನ್ನಾಗಿ ಸಂರಚಿಸುವ ಕುರಿತು ಈ ಮೇಲ್ಕಾಣಿಸಿದ ಸರ್ವೆ ನಂಬರುಗಳಲ್ಲಿ ವಾಸಿಸುವ ರೈತರು ಕಾರ್ಮಿಕರಿಗೆ ನೋಟೀಸನ್ನು ನೀಡಿದ್ದು, 3 ಬಾರಿ ದಾಖಲಾತಿಗಳನ್ನು ಮತ್ತು ಆಕ್ಷೇಪಣೆಯನ್ನು ಸಲ್ಲಿಸಲಾಗಿದೆ. ಈ ರೀತಿ ಪದೇ ಪದೇ ನೋಟೀಸನ್ನು ನೀಡುತ್ತಿರುವುದು ಇಲ್ಲಿನ ರೈತರಿಗೆ ಆತಂಕ ಮತ್ತು ಹಿಂಸೆಯನ್ನು ನೀಡಿದಂತಾಗುತ್ತಿದೆ. ಇದೇ ರೀತಿ ಮುಂದುವರಿದರೆ ಉಗ್ರ ಹೋರಾಟ ಮಾಡುತ್ತೇವೆಂದು ಕಳಸ ರೈತ ಕಾರ್ಮಿಕ ಹಿತರಕ್ಷಣಾ ಸಮಿತಿಯಿಂದ ತಿಳಿಸಿದ್ದಾರೆ.
