ಮೂಡಿಗೆರೆ: ನಿವೇನಕ್ಕಾಗಿ ಒತ್ತಾಯಿಸಿ ತಾಲೂಕಿನ ಗೋಣಿಬೀಡು ಗ್ರಾ.ಪಂ. ಎದುರು ಗುರುವಾರ ವಸತಿಗಾಗಿ ಹೋರಾಟ ವೇದಿಕೆಯ ಮುಖಂಡರು ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ವೇದಿಕೆಯ ಗೌರವಾಧ್ಯಕ್ಷ ಬಿ.ರುದ್ರಯ್ಯ ಮಾತನಾಡಿ, ಗೋಣಿಬೀಡು ಹೋಬಳಿ, ಕಮ್ಮರಗೋಡು ಗ್ರಾಮದ ಸರ್ವೆ ನಂ.127 ರಲ್ಲಿ 2.15 ಎಕರೆ ಹಾಗೂ ಸರ್ವೆ ನಂ.126 ರಲ್ಲಿ 25 ಗುಂಟೆ ಒಟ್ಟು 3 ಎಕರೆ ಸರಕಾರಿ ಭೂಮಿಯನ್ನು ಆಶ್ರಯ ನಿವೇಶನಕ್ಕಾಗಿ ಕಾಯ್ದಿರಿಸಲಾಗಿತ್ತು. ಅಲ್ಲದೇ ಅಧಿಕಾರಿಗಳು ಸ್ಥಳ ಪರಿಶೀಲಿಸಿ ನಕಾಶೆ ತಯಾರಿಸಿದ್ದಾರೆ. ಆದರೆ ಇದುವರೆಗೂ ಈ ಭೂಮಿಯನ್ನು ಗ್ರಾ.ಪಂ. ವ್ಯಾಪ್ತಿಗೆ ವರ್ಗಾಯಿಸದೇ ಜನವರೋಧಿ ನೀತಿ ಮತ್ತು ಭೂಮಾಲಿಕರ ವಕಾಲತ್ತು ವಹಿಸುತ್ತಿರುವುದು ಖಂಡನೀಯ. ಕೂಡಲೇ ಈ ಭೂಮಿಯನ್ನು ಪಂಚಾಯಿತಿಗೆ ವರ್ಗಾಯಿಸಬೇಕೆಂದು ಆಗ್ರಹಿಸಿದರು.

ವೇದಿಕೆ ಅಧ್ಯಕ್ಷ ಕೆ.ಕೆ.ಕೃಷ್ಣಪ್ಪ ಮಾತನಾಡಿ, ಸರ್ವೆ ನಂ.144 ರಲ್ಲಿ ಈಗಾಗಲೇ ಕಳೆದ 10 ವರ್ಷದಿಂದ ಆಶ್ರಯ ನಿವೇಶನಕ್ಕೆ ಕಾಯ್ದಿರಿಸಿರುವ ಜಾಗದಲ್ಲಿ ನಿವೇಶನ ಕಲ್ಪಿಸುವಂತೆ ಹಲವು ಬಾರಿ ಹೋರಾಟ ನಡೆಸಿದರೂ ಇದೂವರೆಗೂ ಫಲಾನುಭವಿಗಳ ಪಟ್ಟಿ ಆಯ್ಕೆ ಮಾಡದೇ ವಿಳಂಬ ನೀತಿ ಅನುಸರಿಸುತ್ತಿದ್ದಾರೆ. ಈ ಜಾಗದಲ್ಲಿ ಈಗಾಗಲೇ 2 ಅಕ್ರಮ ಮನೆ ನಿರ್ಮಿಸುತ್ತಿದ್ದು, ಈ ಬಗ್ಗೆ ದೂರು ನೀಡಲಾಗಿದ್ದು, ಕೂಡಲೇ ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು. ಅಲ್ಲದೇ ಕೂಲಿ ಲೈನಿನ ವಾಸಿಗಳು ಮತ್ತು ಬಾಡಿಗೆ ಮನೆ ವಾಸಿಗಳ ಅರ್ಹ ಫಲಾನುಭವಿಗಳ ಪಟ್ಟಿ ತಯಾರಿಸಿ ನಿವೇಶನ ಕಲ್ಪಿಸಬೇಕು. ವಿಳಂಬ ನೀತಿ ಅನುಸರಿಸಿದರೆ ಗುಡಿಸಲು ನಿರ್ಮಿಸಲು ಮುಂದಾಗುವುದಾಗಿ ಎಚ್ಚರಿಕೆ ನೀಡಿದರು. ಬಳಿಕ ಪಿಡಿಒ ಸಿಂಚನಾ ಅವರಿಗೆ ಮನವಿ ಸಲ್ಲಿಸಿದರು.
ವೇದಿಕೆಯ ಕಾರ್ಯದರ್ಶಿ ರಾಜೇಶ್, ಜಾನಕಿ, ಯಶೋಧ, ಎಚ್.ಸುರೇಶ್, ರವಿ, ರಾಜೇಶ್, ಭಾಗ್ಯ, ಮಂಜುಳ ಮತ್ತಿತರರಿದ್ದರು.
