ಕುಂದಾಪುರ: ಯಕ್ಷಗಾನ ಪ್ರದರ್ಶನದ ವೇಳೆ ಪ್ರೇಕ್ಷಕರ ವರ್ತನೆಗೆ ಕಲಾವಿದ ಆಕ್ರೋಶ ವ್ಯಕ್ತಪಡಿಸಿದ ಘಟನೆಯೊಂದು ಜಿಲ್ಲೆಯ ಕುಂದಾಪುರ ತಾಲೂಕಿನ ಹೆನ್ನಾಬೈಲು ಗ್ರಾಮದಲ್ಲಿ ನಡೆದಿದೆ.
ಧರ್ಮಸ್ಥಳ ಮೇಳದ ಯಕ್ಷಗಾನ ಪ್ರಸಂಗ ನಡೆಯುತ್ತಿರುವ ವೇಳೆ, ಭಾಗವತಿಕೆಯ ಮಧ್ಯೆ ಒಬ್ಬ ಪ್ರೇಕ್ಷಕ ಶಿಳ್ಳೆ ಹಾಕಿದ ಹಿನ್ನೆಲೆಯಲ್ಲಿ, ಹಿರಿಯ ಯಕ್ಷಗಾನ ಕಲಾವಿದ ಅಶೋಕ್ ಭಟ್ ಉಜಿರೆ ಅವರು ವೇದಿಕೆಯಿಂದಲೇ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ವೇಷ ಧರಿಸಿಕೊಂಡಿದ್ದಂತೆಯೇ ಮಾತನಾಡಿದ ಅವರು, ಯಕ್ಷಗಾನ ಪ್ರದರ್ಶನದ ವೇಳೆ ಸೌಜನ್ಯ ಕಾಪಾಡಬೇಕೆಂದು ಪ್ರೇಕ್ಷಕರಿಗೆ ತರಾಟೆ ತೆಗೆದುಕೊಂಡು, ಅಸಭ್ಯ ವರ್ತನೆ ಸಹಿಸಲಾಗುವುದಿಲ್ಲ ಎಂದು ಎಚ್ಚರಿಕೆ ನೀಡಿದರು. “ಇಂತಹ ಪ್ರೇಕ್ಷಕರ ಅಗತ್ಯವಿಲ್ಲ” ಎಂಬ ಹೇಳಿಕೆಯಿಂದ ಗರಂ ಆದರು ಎನ್ನಲಾಗಿದೆ.
ಈ ಘಟನೆ ಬಳಿಕ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಯಕ್ಷಗಾನ ವಲಯದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.ಕೆಲವರು ಕಲಾವಿದರ ನಡೆ ಸರಿಯೆಂದು ಸಮರ್ಥಿಸಿಕೊಂಡು, ಯಕ್ಷಗಾನಂತಹ ಪಾರಂಪರಿಕ ಕಲೆಯಲ್ಲಿ ಶಿಸ್ತಿನ ಅವಶ್ಯಕತೆ ಇದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಮತ್ತೊಂದು ಕಡೆ, ಪಾತ್ರಧಾರಿಯಾಗಿ ವೇದಿಕೆಯಲ್ಲಿ ಇರುವಾಗ ಈ ರೀತಿಯ ಪ್ರತಿಕ್ರಿಯೆ ನೀಡುವುದು ಸೂಕ್ತವಲ್ಲ ಎಂದು ಟೀಕಿಸಿದ್ದಾರೆ.
ಒಟ್ಟಿನಲ್ಲಿ, ಕಲಾವಿದರ ಶಿಸ್ತಿನ ನಿರೀಕ್ಷೆ ಮತ್ತು ಪ್ರೇಕ್ಷಕರ ವರ್ತನೆ ಕುರಿತ ಚರ್ಚೆಗೆ ಈ ಘಟನೆ ಕಾರಣವಾಗಿದೆ.
