ಮೂಡಿಗೆರೆ: ಕಳೆದ 9 ದಿನದ ಹಿಂದೆ ಪಟ್ಟಣದ ಕೆ.ಎಂ.ರಸ್ತೆಯಲ್ಲಿ ಮಳೆಗೆ ಬಿದ್ದ ತೆಂಗಿನ ಮರವನ್ನು ಇನ್ನೂ ತೆರವುಗೊಳಿಸಿಲ್ಲ. ಇದರಿಂದ ವಾಹನ ನಿಲುಗಡೆಗೆ ತೊಂದರೆಯಾಗುತ್ತಿದೆ ಎಂದು ಬಿಜೆಪಿ ವಕ್ತಾರ ವಿನಯ್ ಹಳೆಕೋಟೆ ದೂರಿದ್ದಾರೆ.
ಎಲ್ಲಾ ಸುದ್ದಿಗಳನ್ನ ಪಡೆಯಲು PUBLIC IMPACT ವಾಟ್ಸಾಪ್ CHANNEL ಗೆ ಜಾಯಿನ್ ಆಗಿ
ಈ ಕುರಿತು ಮಂಗಳವಾರ ಹೇಳಿಕೆಯಲ್ಲಿ ತಿಳಿಸಿದ್ದು, ಕಳೆದ 9 ದಿನದ ಹಿಂದೆ ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಸುರಿದ ಬಾರಿ ಮಳೆ, ಗುಡುಗು, ಗಾಳಿಗೆ ಅಲ್ಲಲ್ಲಿ ಮರಗಳು ವಿದ್ಯುತ್ ತಂತಿ ಮೇಲೆ ಹಾಗೂ ರಸ್ತೆಗೆ ಅಡ್ಡಲಾಗಿ ಬಿದ್ದು, ವಾಹನ ಸಂಚಾರಕ್ಕೆ ತೊಂದರೆ ಉಂಟಾಗಿತ್ತು. ಅಲ್ಲದೇ ಬಹುತೇಕ ಶಾಲೆಗಳ ಹೆಂಚುಗಳು, ಅಂಗಡಿಗಳ ಬೋರ್ಡ್, ಶೆಡ್ಗಳ ಶೀಟ್ಗಳು ಹಾರಿ ಹೋಗಿದ್ದು, ಇದರಿಂದ ಬಾರೀ ಅನಾಹುತ ಹಾಗೂ ನಷ್ಟ ಸಂಭವಿಸಿತ್ತು. ಹಾಗೆ ತಾಲೂಕಿನಾದ್ಯಂತ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು, ಮೆಸ್ಕಾಂ ಸಿಬ್ಬಂದಿಗೆ ತಲೆ ನೋವಾಗಿ ಪರಿಣಮಿಸಿತ್ತು.
ಪಟ್ಟಣದ ದೊಡ್ಡಿಬೀದಿ ರಸ್ತೆಯಲ್ಲಿ ಬೃಹತ್ ಗಾತ್ರದ ಮರವೊಂದು ರಸ್ತೆಗೆ ಅಡ್ಡಲಾಗಿ ಬಿದ್ದಿತ್ತು. ಈ ಮರವನ್ನು 3 ದಿನದ ಬಳಿಕ ತೆರವುಗೊಳಿಸಲಾಗಿತ್ತು. ಕೆ.ಎಂ.ರಸ್ತೆ ರಾಷ್ಟ್ರೀಯ ಹೆದ್ದಾರಿ 173ಯಲ್ಲಿ ಬೃಹತ್ ಗಾತ್ರದ ತೆಂಗಿನ ಮರವೊಂದು ರಸ್ತೆಗೆ ಅಡ್ಡಲಾಗಿ ಬಿದ್ದಿತ್ತು. ಇದರಿಂದ ಸುಮಾರು 1 ಗಂಟೆ ಟ್ರಾಫಿಕ್ ಜಾಮ್ ಆಗಿತ್ತು. ಕೂಡಲೇ ಮರವನ್ನು ಕಟಾವುಗೊಳಿಸಿ ರಸ್ತೆ ಸಂಚಾರಕ್ಕೆ ಅನುವು ಮಾಡಿಕೊಡಲಾಗಿತ್ತು. ಆದರೆ ಆ ಮರವನ್ನು ರಸ್ತೆ ಬದಿಯಲ್ಲೇ ಬಿಟ್ಟಿದ್ದು, 9 ದಿನ ಕಳೆದರೂ ಇನ್ನೂ ತೆರವುಗೊಳಿಸಿಲ್ಲ. ಇದರಿಂದ ಪಾರ್ಕಿಂಗ್ಗೆ ತೊಂದರೆ ಎದುರಾಗಿದೆ. ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಈ ಮರವನ್ನು ತೆರವುಗೊಳಿಸಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಬೇಕೆಂದು ಒತ್ತಾಯಿಸಿದ್ದಾರೆ.
