ಚಿಕ್ಕಮಗಳೂರು: ಕಾಫಿನಾಡಿನ ಮಾಣಿಕ್ಯಾಧಾರಕ್ಕೆ ಕುಟುಂಬದ ಜೊತೆ ಬಂದಿದ್ದ 15 ವರ್ಷದ ಬಾಲಕಿ ಇದ್ದಕ್ಕಿದ್ದಂತೆ ಆ ದಟ್ಟ ಕಾನನದಲ್ಲಿ ಕಾಣೆಯಾಗಿದ್ದು, ಒಂದು ದಿನ ಕಳೆದ್ರೂ ಸುಳಿವು ಸಿಕ್ಕಿಲ್ಲ.
ಕೇರಳದ ಪಾಲಕ್ಕಾಡ್ ಜಿಲ್ಲೆಯ ಶ್ರೀನಂದ (15) ನಾಪತ್ತೆಯಾದ ಬಾಲಕಿ. ಶಾಲೆಗೆ ರಜೆ ಸಲುವಾಗಿ ಕುಟುಂಬಸ್ಥರ ಸಮೇತ ಕರ್ನಾಟಕದ ಪ್ರವಾಸಕ್ಕೆ ಬಂದಿದ್ದಳು. ಉತ್ತರ ಕರ್ನಾಟಕ ಸುತ್ತಿ ದಕ್ಷಿಣ ಕರ್ನಾಟಕದ ಕಾಫಿನಾಡಿಗೆ ಬಂದಿದ್ದವಳು ದತ್ತಪೀಠದ ಮಾಣಿಕ್ಯಾಧಾರ ಬಳಿ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದಾಳೆ. ಕುಟುಂಬದ ಜೊತೆಗಿದ್ದ ಆಕೆ ಮಾಣಿಕ್ಯಾಧಾರದ ಜಲಪಾತದ ಬಳಿ ಹೋಗುವಾಗ ಕುಟುಂಬಸ್ಥರು ಮುಂದೆ ಹೋಗುತ್ತಿದ್ದರು. ಈ ವೇಳೆ ಹಿಂದಿದ್ದವಳು ಕ್ಷಣಾರ್ಧದಲ್ಲಿ ನಾಪತ್ತೆಯಾಗಿದ್ದಾಳೆ
ಕುಟುಂಬಸ್ಥರು ತಕ್ಷಣ ಸುತ್ತಮುತ್ತ ಹುಡುಕಾಟ ಆರಂಭಿಸಿದರೂ ಕೂಡ ಆಕೆ ಸುಳಿವು ಸಿಕ್ಕಿಲ್ಲ. ವಿಷಯ ತಿಳಿದು ಅರಣ್ಯ ಇಲಾಖೆ ಸಿಬ್ಬಂದಿ, ಪೊಲೀಸ್ ಹಾಗೂ ಅಗ್ನಿಶಾಮಕ ದಳದ 30ಕ್ಕೂ ಹೆಚ್ಚು ಸಿಬ್ಬಂದಿ ಏ.7ರ ಮಧ್ಯರಾತ್ರಿ 1 ಗಂಟೆವರೆಗೆ ಹುಡುಕಾಡಿದ್ದಾರೆ. ಆದರೆ, ಆಕೆಯ ಸುಳಿವು ಸಿಕ್ಕಿಲ್ಲ. ಕಗ್ಗತ್ತಲು, ದಟ್ಟ ಕಾನನ, ಬೆಟ್ಟ-ಗುಡ್ಡಗಳ ಇಳಿಜಾರು ಪ್ರದೇಶ ಆಗಿದ್ದರಿಂದ ಕಾರ್ಯಾಚರಣೆ ಕೈಬಿಟ್ಟ ಅಧಿಕಾರಿಗಳು ಏ.8ರ ಬೆಳಿಗ್ಗೆ ಮತ್ತೆ ಶೋಧ ಕಾರ್ಯ ಮುಂದುವರೆಸಿದ್ದರು. ಇದೀಗ, ಶೋಧ ಕಾರ್ಯಕ್ಕೆ ಎಸ್.ಡಿ.ಆರ್.ಎಫ್ ತಂಡ ಕೂಡ ಜೊತೆಗೂಡಿದೆ.
ಬೆಳಗಿನ ಜಾವ 5 ಗಂಟೆಯಿಂದಲೇ ಶೋಧ ಕಾರ್ಯ ಆರಂಭಿಸಿದ ಸಿಬ್ಬಂದಿ ಥರ್ಮಲ್ ಡ್ರೋನ್ ಮೂಲಕ ಬಾಲಕಿ ಪತ್ತೆಗೆ ಮುಂದಾಗಿದ್ದಾರೆ. ಮೂರು ಇಲಾಖೆಯ ಸುಮಾರು 60ಕ್ಕೂ ಹೆಚ್ಚು ಸಿಬ್ಬಂದಿ 5 ತಂಡಗಳನ್ನಾಗಿ ಮಾಡಿಕೊಂಡು ಶೋಧಕಾರ್ಯಕ್ಕೆ ಇಳಿದಿದ್ದಾರೆ. ಬಾಲಕಿ ಮಿಸ್ ಆದ ಜಾಗ ತೀವ್ರ ಕಡಿದಾದ ಪ್ರದೇಶವಾಗಿದ್ದು ಅಲ್ಲಿಂದ ಯಾವ-ಯಾವ ಮಾರ್ಗದಲ್ಲಿ ಹೋಗಲು ಸಾಧ್ಯವಿರುತ್ತೋ ಆ ಮಾರ್ಗದಲ್ಲೆಲ್ಲಾ ತಂಡ ಹುಡುಕಾಡುತ್ತಿದೆ. ಆದರೆ, ಜಾರಿದ್ದಾಳೆ ಅನ್ನೋದಕ್ಕೆ ಮಳೆ ಇಲ್ಲ. ಕಾಡು ಬೇಸಿಗೆಗೆ ಒಣಗಿ ಬಿಡಿಬಿಡಿಯಾಗಿದೆ. ನಾಪತ್ತೆಯಾದ ಒಂದು ಗಂಟೆಯಿಂದಲೇ ಹತ್ತಾರು ಜನ ಹುಡುಕಾಡಿದರೂ ಸಿಗದಿರೋದು ಸಾಕಷ್ಟು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.
