ಮೂಡಿಗೆರೆ: ಡಾ.ಬಿ.ಆರ್.ಅಂಬೇಡ್ಕರ್ ಅವರ ವಿಚಾರವನ್ನು ತಿಳಿದುಕೊಂಡರೆ ಈ ಸಮಾಜದಲ್ಲಿ ಪ್ರತಿಯೊಬ್ಬರೂ ಪರಿಪೂರ್ಣವಾದ ವ್ಯಕ್ತಿಯಾಗಲು ಸಾಧ್ಯವಿದೆ ಎಂದು ವಿಧಾನ ಪರಿಷತ್ ಉಪಸಭಾಪತಿ ಎಂ.ಕೆ.ಪ್ರಾಣೇಶ್ ಹೇಳಿದರು.
ಅವರು ಪಟ್ಟಣದ ಅಡ್ಯಂತಾಯ ರಂಗಮಂದಿರದಲ್ಲಿ ತಾಲೂಕು ಆಡಳಿತ ವಿವಿಧ ಇಲಾಖೆ ಹಾಗೂ ಸಂಘಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಅವರ 135ನೇ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಈ ಸಮಾಜದ ಬದಲಾವಣೆಗಾಗಿ ಕ್ರಾಂತಿಯ ಸೂರ್ಯೊದಯವಾದಂತ ದಿನವೇ ಅಂಬೇಡ್ಕರ್ ಅವರ ಜನ್ಮ ದಿನ. ಅವರ ಮೌಲ್ಯ ಇಡೀ ವಿಶ್ವಕ್ಕೆ ತಿಳಿದಿತ್ತೇ ಹೊರತು, ನಮ್ಮ ದೇಶದ ನಾಯಕರಿಗೆ ಅರಿವಿರಲಿಲ್ಲ. ಅವರ ಜ್ಞಾನವನ್ನು ಸಮರ್ಪಕವಾಗಿ ಬಳಸಿಕೊಂಡಿದ್ದರೆ ಇಂದು ನಮ್ಮ ದೇಶ ಉನ್ನತ ಸ್ಥಿತಿಯಲ್ಲಿ ಸಾಗುತ್ತಿತ್ತು. ಅವರ ಹೆಸರನ್ನು ರಾಜಕೀಯ ಹಾಗೂ ನಾಟಕೀಯವಾಗಿ ಬಳಸಿಕೊಳ್ಳುವುದನ್ನು ಬಿಟ್ಟು, ಅವರ ಜೀವನ ಚರಿತ್ರೆಯನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕೆಂದು ಹೇಳಿದರು.
ಶಾಸಕಿ ನಯನಾ ಮೋಟಮ್ಮ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಕೇವಲ ಮಾತಿನಲ್ಲಿ ಮಾತ್ರ ಅಂಬೇಡ್ಕರ್ ಅವರನ್ನು ಗುಣಗಾನ ಮಾಡಿದರೆ ಸಾಲದು. ಬದಲಾಗಿ ಅವರ ಆಶಯವನ್ನು ಪರಿಪೂರ್ಣ ಮಾಡಬೇಕು. ತಾನು ಮೀಸಲು ಕ್ಷೇತ್ರದಲ್ಲಿ ಶಾಸಕಿಯಾಗಿದ್ದರೆ, ಅದು ಅಂಬೇಡ್ಕರ್ ಅವರಿಂದ ಸಾಧ್ಯವಾಗಿದೆ. ಹಾಗಾಗಿ ಇಲ್ಲಿನ ಮತದಾರರ ಭಾವನೆಗಳಿಗೆ ಸ್ಪಂಧಿಸುವ ಮೂಲಕ ಅಂಬೇಡ್ಕರ್ ಅವರ ಆಶಯವನ್ನು ಪಾಲಿಸುತ್ತಿದ್ದೇನೆ. 20 ವರ್ಷದಿಂದ ಕ್ಷೇತ್ರದಲ್ಲಿ ಸಾಧ್ಯವಾಗದ ನಿವೇಶನ ವಿತರಣೆಯನ್ನು ತಾನು ಮಾಡಿದ್ದೇನೆಂದ ಅವರು, ಆರ್ಥಿಕ ಮತ್ತು ಸಾಮಾಜಿಕ ನ್ಯಾಯ ಸಿಗಬೇಕೆಂದರೆ ಪ್ರತಿಯೊಬ್ಬರೂ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಉನ್ನತ ಹುದ್ದೆ ಅಲಂಕರಿಸುವಂತೆ ಶ್ರಮಿಸಬೇಕೆಂದು ಸಲಹೆ ನೀಡಿದರು.

ಪತ್ರಕರ್ತ ಎನ್ ರವಿಕುಮಾರ್, ಅಂಬೇಡ್ಕರ್ ಜೀವನ ಚರಿತ್ರೆ ಬಗ್ಗೆ ಉಪನ್ಯಾಸ ನೀಡಿದರು. ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು.
ಬೆಳೆಗಾರರ ಸಂಘದ ಅಧ್ಯಕ್ಷ ಬಿ.ಆರ್.ಭಾಲಕೃಷ್ಣ, ಪ.ಪಂ. ಮಾಜಿ ಉಪಾಧ್ಯಕ್ಷ ರಮೇಶ್ ಹೊಸ್ಕೆರೆ, ಮಾಜಿ ಸದಸ್ಯ ಹಂಜಾ, ಜಿಲ್ಲಾ ಕೆಡಿಪಿ ಸದಸ್ಯ ಸುಧೀರ್ ಚಕ್ರಮಣಿ, ತಾಲೂಕು ಸದಸ್ಯರಾದ ಕುನ್ನಳ್ಳಿ ರವಿ, ಹರೀಶ್ ಸಬ್ಬೇನಹಳ್ಳಿ, ಡಿಎಸ್ಎಸ್ ಜಿಲ್ಲಾಧ್ಯಕ್ಷ ಸುಂದ್ರೇಶ್ ಹೊಯ್ಸಳಲು, ತಹಸೀಲ್ದಾರ ಎಸ್.ಅಶ್ವಿನಿ, ಸಮಾಜ ಕಲ್ಯಾಣಾಧಿಕಾರಿ ಸೋಮಶೇಖರ್, ಸಿಪಿಐ ರಾಜಶೇಖರ್, ಸುಂದ್ರೇಶ್ ಕನ್ನಾಪುರ, ಮಂಜುನಾಥ್ ಬೆಟ್ಟಗೆರೆ, ಹೆಸಗಲ್ ಗಿರೀಶ್, ಬಾನುಪ್ರಕಾಶ್, ಮುತ್ತಪ್ಪ, ಕೃಷ್ಣ, ಚಂದ್ರೇಶ್, ಸುರೇಂದ್ರ, ವಿಜೇಂದ್ರ, ಯೋಗೇಶ್, ದೇಜಪ್ಪ, ಚಂದ್ರಶೇಖರ್, ಸೀತಮ್ಮ ಮತ್ತಿತರರಿದ್ದರು.
