ಚಿಕ್ಕಮಗಳೂರು: ಕಾಫಿನಾಡಲ್ಲಿ ಬಿರುಗಾಳಿ ಸಹಿತ ಸುರಿದ ಭಾರಿ ಮಳೆ ಆಲ್ಲೂರು ಸುತ್ತಮುತ್ತ ಅವಾಂತರ ಸೃಷ್ಟಿಸಿತು. ಬಿಸಿಲಿನಿಂದ ಕಂಗೆಟ್ಟಿದ್ದ ಜನ ಕೊಂಚ ಸಮಾಧಾನಗೊಂಡರೆ, ಹಲವರಿಗೆ ಮಳೆ ಭಾರಿ ನಷ್ಟ ತಂದಿದೆ.
ಬಿರುಗಾಳಿ ಸಹಿತ ಮಿಂಚು, ಗುಡುಗಿನ ರಭಸದೊಂದಿಗೆ ಆರಂಭವಾದ ಆಲಿಕಲ್ಲು ಮಳೆ ಅರ್ಧ ಗಂಟೆಗೂ ಹೆಚ್ಚು ಕಾಲ ಸುರಿಯಿತು. ಮೇದರ ಬೀದಿ ಹಾಗೂ ರೈಸ್ ಮಿಲ್ ರಸ್ತೆಯ ವಾರ್ಡ್ಗಳಲ್ಲಿ ಹಲವು ಮನೆಗಳ ಚಾವಣಿ ಹಾನಿಯಾಗಿದೆ.
ಕೆಲ ಮನೆಯ ಹೆಂಚುಗಳ ಮೇಲೆ ಮರದ ಕೊಂಬೆಗಳು ಮುರಿದು ಬಿದ್ದು ಚಾವಣಿ ಜಖಂಗೊಂಡಿದೆ. ಸಿಮೆಂಟ್ ಶೀಟುಗಳು ಮತ್ತು ಮನೆ ಹಂಚುಗಳು ಗಾಳಿಯ ರಭಸಕ್ಕೆ ಹಾರಿ ಕೆಳಗೆ ಬಿದ್ದಿವೆ. ಬಿರಂಜಿ ಹೊಳೆಯ ಬಳಿ ಹಾದು ಹೋಗುವ ರಾಜ್ಯ ಹೆದ್ದಾರಿಯಲ್ಲಿ ಮರಗಳು ಮುರಿದು ಬಿದ್ದಿವೆ. 12 ವಿದ್ಯುತ್ ಕಂಬಗಳು ರಸ್ತೆ ಮೇಲೆ ಉರುಳಿದ್ದು ಕೆಲ ಕಾಲ ಚಿಕ್ಕಮಗಳೂರು-ಶೃಂಗೇರಿ ಹೆದ್ದಾರಿ ಸಂಪೂರ್ಣವಾಗಿ ಬಂದ್ ಆಗಿತ್ತು.
ಪಕ್ಕದಲ್ಲಿ ಇದ್ದ ಹೈಟೆಕ್ ಮೋಲ್ ಜೋನ್ ಎಂಬ ವೀಲ್ ಅಲೈನ್ನೆಂಟ್ ಶಾಪ್ ಚಾವಣಿಗೆ ಹಾಕಿದ್ದ ತಗಡಿನ ಶೀಟುಗಳು ಸುಮಾರು 200 ಮೀಟರ್ ದೂರಕ್ಕೆ ಹಾರಿ ಹೋಗಿವೆ. ಪೆಟ್ರೋಲ್ ಬಂಕ್ ಮಾಲಿಕ ಸಾರ್ಥಕ್ ಸಾಗರ್ ಅವರ ಮನೆ ಹಿಂಭಾಗ ನಿರ್ಮಿಸಿದ್ದ ಕುರಿ ಸಾಕಣೆಯ ಶೆಡ್ ಸಂಪೂರ್ಣ ಹಾನಿಯಾಗಿದೆ.
ಶಂಕರ ಫಾಲ್ಸ್ ಬಳಿ ಎರಡು ಮರಗಳು ರಸ್ತೆಯ ಮೇಲೆ ಉರುಳಿ ಬಿದ್ದಿದ್ದು ಎರಡು ಗಂಟೆಗೂ ಹೆಚ್ಚಿನ ಸಮಯ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ಸ್ಥಳೀಯರು, ವಾಹನ ಸವಾರರು ಸೇರಿ ಮರಗಳನ್ನು ತುಂಡರಿಸಿ ಸಂಚಾರ ಸುಗಮಗೊಳಿಸಿದರು
