ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್. ಪುರ ತಾಲ್ಲೂಕಿನ ಬಿ.ಹೆಚ್. ಕೈಮರ ಬಳಿ ಮದುವೆ ಮುಗಿಸಿ ಮರಳುತ್ತಿದ್ದ ಕುಟುಂಬವೊಂದು ಭೀಕರ ಅಪಘಾತದಿಂದ ಕೂದಲೆಳೆ ಅಂತರದಲ್ಲಿ ಪಾರಾಗಿದೆ.
ಬಾಳೆಹೊನ್ನೂರಿನ ರಂಭಾಪುರಿ ಮಠದಲ್ಲಿ ಮದುವೆ ಮುಗಿಸಿಕೊಂಡು ದಾವಣಗೆರೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ನಿಯಂತ್ರಣ ತಪ್ಪಿದ ಕಾರು ರಸ್ತೆ ಬದಿಯ ಅಂಗಡಿಯ ಕಟ್ಟೆ ಹಾಗೂ ಉಪ್ಪಿನ ಮೂಟೆಗಳಿಗೆ ಜೋರಾಗಿ ಡಿಕ್ಕಿ ಹೊಡೆದಿದೆ.
ಅಪಘಾತದ ರಭಸಕ್ಕೆ ಕಾರು ವಿದ್ಯುತ್ ಮತ್ತು ಟೆಲಿಫೋನ್ ಕಂಬಗಳಿಗೂ ಅಪ್ಪಳಿಸಿ, ರಸ್ತೆಯಲ್ಲೇ ಪಲ್ಟಿಯಾಗಿ ಮತ್ತೆ ಬಾಳೆಹೊನ್ನೂರಿನ ಕಡೆಗೆ ಮುಖ ಮಾಡಿ ನಿಂತಿದೆ.
ಸ್ವತಃ ಮದುಮಗನೇ ಚಾಲನೆ ಮಾಡುತ್ತಿದ್ದ ಈ ಕಾರಿನಲ್ಲಿ ನವವಧು ಸೇರಿದಂತೆ ಇಡೀ ಕುಟುಂಬ ಇತ್ತಾದರೂ, ಎಲ್ಲರೂ ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿರುವುದು ನೆರೆದಿದ್ದವರಲ್ಲಿ ಅಚ್ಚರಿ ಮೂಡಿಸಿದೆ.
