ಮೂಡಿಗೆರೆ: ಕಾರು ಅಪಘಾತದಲ್ಲಿ ಗಾಯಗೊಂಡು ರಕ್ತದ ಮಡುವಿನಲ್ಲಿ ಒದ್ದಾಡುತ್ತಿದ್ದ ಇಬ್ಬರನ್ನ ರಕ್ಷಣೆ ಮಾಡಿ ಚಿಕಿತ್ಸೆ ಕೊಡಿಸಿ ಮಾನವೀಯತೆ ಮೆರೆದಿದ್ದಾರೆ ಮೂಡಿಗೆರೆ ಶಾಸಕಿ ನಯನಾ ಮೋಟಮ್ಮ.
ಹೌದು, ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ನಿಡುವಾಳೆ ಬಳಿ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಗುದ್ದಿದ್ದ ಪರಿಣಾಮ ಇಬ್ಬರು ರಕ್ತದ ಮಡುವಿನಲ್ಲಿ ಒದ್ದಾಟ ನಡೆಸ್ತಾ ಇದ್ರು. ಈ ವೇಳೆ ಅದೇ ದಾರಿಯಲ್ಲಿ ಬರುತ್ತಿದ್ದ ನಯನಾ ಮೋಟಮ್ಮ, ಗಾಯಾಳುಗಳನ್ನ ರಕ್ಷಿಸುವಂತೆ ತಮ್ಮ ಸಿಬ್ಬಂದಿಗಳಿಗೆ, ಆಪ್ತರಿಗೆ ಹೇಳಿದ್ದಾರೆ.
ಕೂಡಲೇ ಎಲ್ಲರೂ ಒಂದು ಕ್ಷಣವೂ ತಡಮಾಡದೇ ಒದ್ದಾಟ ನಡೆಸುತ್ತಿದ್ದ ಇಬ್ಬರನ್ನ ತಮ್ಮ ಫಾರ್ಚೂನರ್ ಕಾರಿನಲ್ಲೇ, ಪೊಲೀಸ್ ಎಸ್ಕಾರ್ಟ್ ನೊಂದಿಗೆ ಬಣಕಲ್ ಶ್ರೀಕೃಷ್ಣ ಆಸ್ಪತ್ರೆಗೆ ಕರೆದುಕೊಂಡು ಬಂದು ಪ್ರಥಮ ಚಿಕಿತ್ಸೆ ಕೊಡಿಸಿದ್ದಾರೆ. ಬಳಿಕ ಮಂಗಳೂರಿನ ಆಸ್ಪತ್ರೆಗೆ
ಕಿರಣ್, ಫ್ರಫುಲ್ ಎಂಬುವವರನ್ನ ಆಂಬುಲೆನ್ಸ್ ನಲ್ಲಿ ಕರೆದುಕೊಂಡು ಹೋಗಲಾಯಿತು. ಕಾರಿಗೆ ರಕ್ತದ ಕಲೆಗಳು ಅಂಟಿದ್ರೂ ತಲೆಕೆಡಿಸಿಕೊಳ್ಳದೇ, ಗಾಯಾಳುಗಳ ರಕ್ತಸ್ರಾವವನ್ನ ನಿಲ್ಲಿಸಿ, ಪ್ರಥಮ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗೆ ಗಾಯಾಳುಗಳನ್ನ ಕಳುಹಿಸಿದ ನಯನಾ ಮೋಟಮ್ಮರ ಸಮಯಪ್ರಜ್ಙೆ ಹಾಗೂ ಮಾನವೀಯತೆಗೆ ಜನಸಾಮಾನ್ಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ
