ಎನ್. ಆರ್.ಪುರ: ಒಂದೇ ದಿನದ ಹಸೂಗೂಸನ್ನು ಪೊದೆಯಲ್ಲಿ ಟವೆಲ್ ಸುತ್ತಿ ಎಸೆದು ಹೋಗಿರುವ ಅಮಾನವೀಯ ಘಟನೆ ಚಿಕ್ಕಮಗಳೂರು ಜಿಲ್ಲೆಯ ಎನ್. ಆರ್.ಪುರ ತಾಲೂಕಿನ ಮುತ್ತಿನಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಣಿವೆ ಗ್ರಾಮದ ಸೂರುಗುಡಿಗೆಯ ದೇವಸ್ಥಾನದ ಸಮೀಪ ಪತ್ತೆಯಾಗಿದೆ.
ಎಂದಿನಂತೆ ನೀರು ಬಿಡಲು ಆ ಮಾರ್ಗವಾಗಿ ತೆರಳಿದ್ದ ನೀರುಗಂಟಿ ಶ್ರೀನಿವಾಸ್ ಅವರು ಪೊದೆಯಲ್ಲಿ ಮಗು ಅಳುವ ಶಬ್ದ ಕೇಳಿ ಬಂದಿದೆ. ಸ್ಥಳಕ್ಕೆ ಹೋಗಿ ನೋಡಿದಾಗ ರಕ್ತ-ಸಿಕ್ತವಾದ ಶಿಶುವನ್ನು ಟವಲ್ನಲ್ಲಿ ಸುತ್ತಿ ಇಡಲಾಗಿತ್ತು. ಈ ವಿಷಯವನ್ನು ಗ್ರಾಮಸ್ಥರಿಗೆ ಮುಟ್ಟಿಸಿದ ಶ್ರೀನಿವಾಸ್, ಶಿಶುವನ್ನು ಮನೆಗೆ ತೆಗೆದುಕೊಂಡು ಆರೈಕೆ ಮಾಡಿದ್ದಾರೆ. ಗ್ರಾಮದ ಅಂಗನವಾಡಿ ಕಾರ್ಯಕರ್ತೆ ಪ್ರಮೀಳಾ ಅವರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗೆ ಹಾಗೂ ಗ್ರಾಮಸ್ಥ ಅವಿನಾಶ್ ಪೊಲೀಸರಿಗೆ ಮಾಹಿತಿ ನೀಡಿದರು.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದ ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಮತ್ತು ಆರೋಗ್ಯ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಿಬ್ಬಂದಿ ಶಿಶುವಿನ ಆರೈಕೆ ಮಾಡಿ ಆಂಬುಲೆನ್ಸ್ನಲ್ಲಿ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಗೆ ತಂದು ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಶಿಶುವಿನ ತಂದೆ-ತಾಯಿ ಪತ್ತೆಗಾಗಿ ಪೊಲೀಸ್ ಠಾಣೆ ದೂರು ನೀಡಲಾಗಿದೆ. ಸದ್ಯ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಮಕ್ಕಳ ಕಲ್ಯಾಣ ಸಮಿತಿ ನೇತೃತ್ವದಲ್ಲಿ ಶಿಶುವಿನ ಚಿಕಿತ್ಸೆ ಮುಂದುವರೆದಿದೆ. ಶಿಶುಗುಣಮುಖವಾದ ನಂತರ ಚಿಕ್ಕಮಗಳೂರಿನ ಸರ್ಕಾರಿ ವಿಶೇಷ ದತ್ತು ಮಕ್ಕಳ ಕೇಂದ್ರಕ್ಕೆ ಬಿಡಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿ ತಿಳಿಸಿದ್ದಾರೆ.
