ಹಾಸನ ಜಿಲ್ಲೆಯಲ್ಲಿ ಗೃಹಬಳಕೆ ಗ್ಯಾಸ್ ಸಿಲಿಂಡರ್ ಸಮಸ್ಯೆ ಮುಂದುವರಿದಿದೆ. ಗ್ಯಾಸ್ ಸಿಲಿಂಡರ್ ಪಡೆಯಲು ಜನರು ಮುಗಿಬಿದ್ದ ಘಟನೆ ಆಲೂರು ಪಟ್ಟಣದ ಭಾರತ್ ಗ್ಯಾಸ್ ಏಜೆನ್ಸಿ ಎದುರು ನಡೆದಿದೆ. ಗೃಹಬಳಕೆ ಸಿಲಿಂಡರ್ಗಾಗಿ ನೂರಾರು ಮಂದಿ ಗಂಟೆಗಟ್ಟಲೆ ಸರದಿಯಲ್ಲಿ ನಿಂತು ಪರದಾಡಿದರು.
ಇರಾನ್–ಇಸ್ರೇಲ್ ಯುದ್ಧ ಆರಂಭವಾದ ಬಳಿಕ ಶುರುವಾಗಿದ್ದ ಗ್ಯಾಸ್ ಕೊರತೆ ಸಮಸ್ಯೆ,ಕದನ ವಿರಾಮದ ನಂತರ ಜಿಲ್ಲೆಯ ಬಹುತೇಕ ತಾಲ್ಲೂಕು ಕೇಂದ್ರಗಳಲ್ಲಿ ಬಗೆಹರಿದಿದ್ದರೂ, ಆಲೂರು ತಾಲ್ಲೂಕಿನಲ್ಲಿ ಮಾತ್ರ ಸಮಸ್ಯೆ ಮುಂದುವರಿದಿದೆ.
ಶುಕ್ರವಾರ ಕೂಡ ಗ್ಯಾಸ್ ಏಜೆನ್ಸಿ ಮಾಲೀಕರ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದರು. ಬಳಿಕ ಸ್ಥಳಕ್ಕೆ ಭೇಟಿ ನೀಡಿದ್ದ ಆಲೂರು ತಹಶೀಲ್ದಾರ್ ಮಲ್ಲಿಕಾರ್ಜುನ ಅವರು ಗ್ರಾಹಕರೊಂದಿಗೆ ಮಾತುಕತೆ ನಡೆಸಿದರೂ ಜನರು ಸಮಾಧಾನಗೊಂಡಿರಲಿಲ್ಲ.

ಇದೇ ಹಿನ್ನೆಲೆ ಶುಕ್ರವಾರ ಮಧ್ಯಾಹ್ನ ಶಾಸಕ ಸಿಮೆಂಟ್ ಮಂಜು ಅವರು ಗ್ಯಾಸ್ ಏಜೆನ್ಸಿ ಮಾಲೀಕರು ಹಾಗೂ ಅಧಿಕಾರಿಗಳೊಂದಿಗೆ ದಿಡೀರ್ ಸಭೆ ನಡೆಸಿ ತಕ್ಷಣ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದರು. ಆದರೂ ಇಂದು ಮತ್ತೆ ಗ್ಯಾಸ್ ಸಿಲಿಂಡರ್ಗಾಗಿ ಸಾರ್ವಜನಿಕರು ಪರದಾಡುವ ಪರಿಸ್ಥಿತಿ ನಿರ್ಮಾಣವಾಯಿತು. ಖುದ್ದಾಗಿ ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಸಿಮೆಂಟ್ ಮಂಜು ಅವರು ಗ್ಯಾಸ್ ಏಜೆನ್ಸಿ ಮಾಲೀಕರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
“ಗ್ಯಾಸ್ ಏಜೆನ್ಸಿಯ ತಾಂತ್ರಿಕ ಲೋಪದೋಷದಿಂದ ತಾತ್ಕಾಲಿಕ ಸಮಸ್ಯೆ ಉಂಟಾಗಿದೆ. ಗ್ರಾಹಕರು ತಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ಬರುವ OTP ಅನ್ನು ಬೇರೆಯವರೊಂದಿಗೆ ಹಂಚಿಕೊಳ್ಳಬಾರದು” ಎಂದು ಶಾಸಕ ಮಂಜು ಮನವಿ ಮಾಡಿದರು.
ಮೂರು ಲಾರಿಗಳಲ್ಲಿ ಗ್ಯಾಸ್ ಸಿಲಿಂಡರ್ ತರಿಸಲಾಗಿದ್ದು, ಸಿಲಿಂಡರ್ ಪಡೆಯಲು ಜನರು ನೂಕುನುಗ್ಗಲು ನಡೆಸಿದರು.ಕೆಲವೆಡೆ ಗ್ರಾಹಕರು ಕಿಲೋಮೀಟರ್ಗಟ್ಟಲೆ oಸರದಿಯಲ್ಲಿ ನಿಂತಿರುವ ದೃಶ್ಯ ಕಂಡುಬಂದಿತು.ಸಿಲಿಂಡರ್ ಸಿಗುತ್ತಿದ್ದಂತೆಯೇ ಮಹಿಳೆಯರು ತಲೆಯ ಮೇಲೆ ಹೊತ್ತು ಮನೆಗಳತ್ತ ತೆರಳಿದ ದೃಶ್ಯ ಗಮನ ಸೆಳೆಯಿತು.
