ಕಳಸ : ಯಾವುದೇ ಒಂದು ಸಮುದಾಯದ ಮುಖ್ಯವಾಹಿನಿಗೆ ಬರಬೇಕಾದರೆ ಶಿಕ್ಷಣವೇ ಅತ್ಯಂತ ಶಕ್ತಿಶಾಲಿ ಅಸ್ತ್ರ ಎಂದು ಮೈಸೂರಿನ ರಾಜ್ಯ ಬುಡಕಟ್ಟು ಸಂಶೋಧನ ಕೇಂದ್ರದ ಸಂಶೋಧನಾ ಅಧಿಕಾರಿಗಳಾದ ಡಾ. ಕೃಷ್ಣಮೂರ್ತಿ ಹೇಳಿದರು.
ಕಳಸ ತಾಲೂಕು ಗಿರಿಜನ ಗೌಡಲು ಕ್ಷೇಮಾಭಿವೃದ್ಧಿ ಸಂಘ (ರಿ) ವತಿಯಿಂದ ಎಸ್.ಎಸ್.ಎಲ್.ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಗಳಲ್ಲಿ ಅಧಿಕ ಅಂಕ ಗಳಿಸಿದ ಗೌಡಲು ಸಮುದಾಯದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಇಂದು ಗೌಡಲು ಸಮುದಾಯದ ಮಕ್ಕಳು ಎಸ್.ಎಸ್.ಎಲ್.ಸಿ ಮತ್ತು ಪಿಯುಸಿಯಲ್ಲಿ ಇಷ್ಟೊಂದು ಸಾಗರೋಪಾದಿಯಲ್ಲಿ ಅಂಕ ಗಳಿಸಿ ಸಾಧನೆ ಮಾಡಿರುವುದು ಹೆಮ್ಮೆಯ ವಿಚಾರ. ಗಿರಿಜನ ಸಮುದಾಯದ ಮಕ್ಕಳು ಕೇವಲ ಅಂಕ ಗಳಿಕೆಗೆ ಸೀಮಿತವಾಗದೆ, ಉನ್ನತ ಶಿಕ್ಷಣವನ್ನು ಪಡೆದು ದೇಶದ ಉನ್ನತ ಹುದ್ದೆಗಳನ್ನು ಅಲಂಕರಿಸಬೇಕು. ಆಗ ಮಾತ್ರ ಸಮುದಾಯದ ನೈಜ ಅಭಿವೃದ್ಧಿ ಸಾಧ್ಯ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಮುದಾಯದ ಸಾಂಸ್ಕೃತಿಕ ಹೆಮ್ಮೆಯಾದ ಬುಡಕಟ್ಟು ಜನಪದ ಕಲೆ ಅಂಟಿಗೆ ಪಿಂಟಿಗೆ ಹಾಡಿನ ಮೂಲಕ ಕಾರ್ಯಕ್ರಮಕ್ಕೆ ಸಾಂಪ್ರದಾಯಿಕ ಚಾಲನೆ ನೀಡಲಾಯಿತು.
ಕಾರ್ಯಕ್ರಮದಲ್ಲಿ ಅತ್ಯುನ್ನತ ಅಂಕ ಗಳಿಸಿ ಸಾಧನೆ ಮಾಡಿದ ಎಸ್.ಎಸ್.ಎಲ್.ಸಿ ಯ ೬ ವಿದ್ಯಾರ್ಥಿಗಳು ಹಾಗೂ ದ್ವಿತೀಯ ಪಿಯುಸಿಯ ೯ ವಿದ್ಯಾರ್ಥಿಗಳನ್ನು ಆತ್ಮೀಯವಾಗಿ ಸನ್ಮಾನಿಸಿ ಪ್ರೋತ್ಸಾಹಿಸಲಾಯಿತು. ಇದೇ ಸಂದರ್ಭದಲ್ಲಿ ಕಿರುತೆರೆ ಕಲಾವಿದರಾದ ಗಜೇಂದ್ರ ಮರಸಣಿಗೆ ಹಾಗೂ ವಿವಿಧ ಪ್ರಶಸ್ತಿ ಪುರಸ್ಕೃತ ಯಕ್ಷಗಾನ ಕಲಾವಿದರಾದ ಗಿರಿಜಾ ಗೋಪಾಲ್ ಬೇಡಕ್ಕಿ ಅವರನ್ನು ಸಮುದಾಯದ ವತಿಯಿಂದ ಗೌರವಿಸಿ, ಅಭಿನಂದಿಸಲಾಯಿತು.
ಧ್ವನಿ ಕಾನೂನು ಜಾಗೃತಿ ಟ್ರಸ್ಟ್ ನ ಸಂಸ್ಥಾಪಕರು ಹಾಗೂ ವಕೀಲರಾದ ಶ್ರೀ ಕಾರ್ತಿಕ್ ಕೆ.ಎಲ್ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ, ವಿದ್ಯಾರ್ಥಿಗಳಿಗೆ ಕಾನೂನು ಮತ್ತು ಭವಿಷ್ಯದ ಮಾರ್ಗದರ್ಶನ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ಅನಿಲ್ ಕುಮಾರ್ ಮುಜೆಕಾನು ವಹಿಸಿದ್ದರು. ವೇದಿಕೆಯಲ್ಲಿ ಕಾರ್ಯದರ್ಶಿ ಗಣೇಶ್ ಕುಕ್ಕೋಡು, ಖಜಾಂಚಿ ಬಾಲಕೃಷ್ಣ, ಶಿಕ್ಷಕರಾದ ಶ್ರೀ ಶಿವಪ್ಪ, ರಾಜೇಶ್ ಮಲಗಾರು, ಸುಧಾಕರ ಹುಲ್ಲಿನಕುಡಿಗೆ, ಮೇಘಾನಂದ ಬೇಡಕ್ಕಿ, ದಿನೇಶ್ ಎಸ್.ಕೆ ಮೇಗಲ್, ಸುರೇಶ್ ಕೆರ್ನಾಳಿ, ನಾಗೇಂದ್ರ ಮುಜೆಕಾನು, ಶಿಕ್ಷಕಿ ರೇವತಿ, ಸುರೇಶ್ ಬಿಳಿಗಲ್, ಸತೀಶ್ ಒಡ್ಡಿಕಟ್ಟೆ ಸೇರಿದಂತೆ ಸಮುದಾಯದ ಮುಖಂಡರು, ಪೋಷಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
