ಚಿಕ್ಕಮಗಳೂರು: ರಸ್ತೆ ಕಾಮಗಾರಿ ವಿಚಾರವಾಗಿ ಇಬ್ಬರ ನಡುವೆ ತೀವ್ರ ಬಡಿದಾಟ ನಡೆದಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಆಲ್ದೂರು ಸಮೀಪದ ದೋಣುಗೂಡಿಗೆ ಗ್ರಾಮದಲ್ಲಿ ನಡೆದಿದೆ.
ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಾರ್ಯದರ್ಶಿಯಾಗಿರುವ ರಾಜೇಶ್ ಎಂಬುವವರು ಊರಿಗೆ ರಸ್ತೆ ಮಾಡಿಸಲು ಸರ್ಕಾರದ ಮಟ್ಟದಲ್ಲಿ ಪ್ರಯತ್ನ ನಡೆಸಿ ಕಾಮಗಾರಿಗೆ ಮುಂದಾಗಿದ್ದರು.
ಆದರೆ ಈ ರಸ್ತೆ ನಿರ್ಮಾಣವಾಗುವ ಜಾಗ ತನಗೆ ಸೇರಿದ್ದು ಎಂದು ವಾದಿಸಿದ ರಮೇಶ್ ಎಂಬುವವರು ರಸ್ತೆ ಕಾಮಗಾರಿಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ರಸ್ತೆ ನಿರ್ಮಾಣವಾದರೆ ಗ್ರಾಮದ 20ಕ್ಕೂ ಹೆಚ್ಚು ಕುಟುಂಬಗಳಿಗೆ ಅನುಕೂಲವಾಗುತ್ತದೆ ಎಂದು ರಾಜೇಶ್ ಕಾಮಗಾರಿ ಮುಂದುವರಿಸಲು ಯತ್ನಿಸಿದಾಗ ರಮೇಶ್ ಅವರ ಮೇಲೆ ಹಲ್ಲೆ ನಡೆಸಿದ್ದಾರೆ.
ಮನೆ ಬಾಗಿಲಲ್ಲೇ ಇಬ್ಬರೂ ಒಬ್ಬರ ಮೇಲೊಬ್ಬರು ಬಿದ್ದು ತೀವ್ರವಾಗಿ ಜಗಳವಾಡುತ್ತಿದ್ದರೆ, ರಮೇಶ್ ಅವರ ಪತ್ನಿ ಸೇರಿದಂತೆ ಕುಟುಂಬಸ್ಥರು ಅದನ್ನು ತಡೆಯದೆ ಸುಮ್ಮನೆ ನಿಂತು ನೋಡುತ್ತಿರುವುದು ಕಂಡುಬಂದಿದೆ. ಸದ್ಯ ಈ ಘಟನೆಗೆ ಸಂಬಂಧಿಸಿದಂತೆ ಆಲ್ಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
