ಚಿಕ್ಕಮಗಳೂರು: ಮುತ್ತೋಡಿ ಅಭಯಾರಣ್ಯದ ಮುಖ್ಯ ರಸ್ತೆಯಲ್ಲಿ ಮಂಗಳವಾರ ಮುಂಜಾನೆ ಹಠಾತ್ತನೆ ಕರಡಿಯೊಂದು ಪ್ರತ್ಯಕ್ಷವಾಗಿ ವಾಹನ ಸವಾರರನ್ನು ಕೆಲಕಾಲ ಮಂತ್ರಮುಗ್ಧರನ್ನಾಗಿಸಿದೆ.
ಅಭಯಾರಣ್ಯದ ದಟ್ಟ ಅರಣ್ಯದ ರಸ್ತೆಯಲ್ಲಿ ವಾಹನವೊಂದು ಸಾಗುತ್ತಿದ್ದಾಗ, ಹಠಾತ್ತನೆ ಕರಡಿಯೊಂದು ರಸ್ತೆಯ ಮಧ್ಯದಲ್ಲೇ ಪ್ರತ್ಯಕ್ಷವಾಗಿದೆ. ವಾಹನದ ಹೆಡ್ಲೈಟ್ನ ಬೆಳಕಿನ ನಡುವೆಯೂ ಯಾವುದೇ ಆತಂಕವಿಲ್ಲದೆ, ಅತ್ಯಂತ ಗಂಭೀರವಾಗಿ ರಸ್ತೆಯುದ್ದಕ್ಕೂ ಹೆಜ್ಜೆ ಹಾಕುತ್ತಾ ಸಾಗಿದೆ. ವಾಹನವು ತನ್ನನ್ನು ಹಿಂಬಾಲಿಸುತ್ತಿದ್ದರೂ ತಲೆಕೆಡಿಸಿಕೊಳ್ಳದ ಜಾಂಬವಂತ ಗಾಂಭೀರ್ಯದಿಂದ ಮುಂದೆ ಸಾಗಿದ್ದಾನೆ.
ಸ್ವಲ್ಪ ದೂರ ಮುಂದೆ ಹೋಗಿ ರಸ್ತೆಯ ಮಧ್ಯದಲ್ಲೇ ನಿಂತ ಕರಡಿ, ಒಮ್ಮೆ ವಾಹನದ ಕಡೆಗೆ ತಿರುಗಿ ದಿಟ್ಟಿಸಿ ನೋಡಿದೆ. ಈ ದೃಶ್ಯವು ಸವಾರರಲ್ಲಿ ರೋಮಾಂಚನ ಮತ್ತು ಆತಂಕ ಮೂಡಿಸಿದೆ. ಬಳಿಕ ರಸ್ತೆ ಬದಿಯ ಪೊದೆಯತ್ತ ಸರಿದ ಕರಡಿ, ತಕ್ಷಣವೇ ತನ್ನ ಹಿಂಗಾಲುಗಳ ಮೇಲೆ ಎದ್ದು ನಿಂತು ವಾಹನವನ್ನು ಸೂಕ್ಷ್ಮವಾಗಿ ಗಮನಿಸಿದೆ. ಮನುಷ್ಯರಂತೆ ಎದ್ದು ನಿಂತು ನೋಡಿದ ಕರಡಿಯ ಈ ವಿಶಿಷ್ಟ ಭಂಗಿ ಅಚ್ಚರಿ ಮೂಡಿಸಿದೆ. ನಂತರ ನಿಧಾನವಾಗಿ ಹೆಜ್ಜೆ ಹಾಕುತ್ತಾ ದಟ್ಟ ಕಾಡಿನೊಳಗೆ ಕಣ್ಮರೆಯಾಗಿದೆ
