ಚಿಕ್ಕಮಗಳೂರು: ರಾಜ್ಯದ ನೂತನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಅಗಾಧವಾದ ರಾಜಕೀಯದ ಅನುಭವ ಹುಮ್ಮಸ್ಸು ಹಾಗೂ ಹುರುಪು ಇದೆ. ಆದರೆ ಕೊರತೆ ಇರುವುದು ಇಚ್ಚಾಶಕ್ತಿ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಶುಭಹಾರೈಸುವುದರ ಜೊತೆ ಕಿವಿಮಾತು ಕೂಡ ಹೇಳಿದ್ದಾರೆ.
ಅವರು, ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಪ್ರಮಾಣ ವಚನ ಸ್ವೀಕರಿಸುತ್ತಿರುವ ಹಿನ್ನೆಲೆ ಅಭಿನಂದನೆ ಸಲ್ಲಿಸುವುದರ ಜೊತೆ ಕೆಲ ಸಲಹೆಗಳನ್ನು ನೀಡಿದ್ದಾರೆ. ವೈಯಕ್ತಿಕ ರಾಜಕಾರಣ ಹಿತಾಸಕ್ತಿ ಹಾಗೂ ಪಕ್ಷದ ಹಿತಾಸಕ್ತಿಗಿಂತ ರಾಜ್ಯದ ಹಿತವೇ ಮುಖ್ಯ ಎಂಬ ಆದ್ಯತೆ ಅವರದಾದರೆ ಮಾತ್ರ ಉತ್ತಮ ಕೆಲಸ ಮಾಡಲು ಸಾಧ್ಯ. ಇಲ್ಲದಿದ್ದರೆ ಜನ ಯಾವುದೇ ನಿರೀಕ್ಷೆ ಇಟ್ಟುಕೊಳ್ಳಲು ಸಾಧ್ಯವಿಲ್ಲ ಎಂದರು.
ನೂತನ ಮುಖ್ಯಮಂತ್ರಿಯವರ ಆದ್ಯತೆಗಳು ಸದಾ ರಾಜ್ಯದ ಹಿತಾಸಕ್ತಿ ಮತ್ತು ಅಭಿವೃದ್ಧಿಗೆ ಪೂರಕವಾಗಿರಲಿ. ನಿರುದ್ಯೋಗಿ ಯುವಕರಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ದೂರದೃಷ್ಟಿಯ ಯೋಜನೆಗಳು ಜಾರಿಗೆ ಬರಬೇಕು ಮತ್ತು ಯಾವುದೇ ಕಾರಣಕ್ಕೂ ಸಾಮಾಜಿಕ ಅನ್ಯಾಯವಾಗದಂತೆ ಆಡಳಿತ ನಡೆಸಬೇಕು ಎಂದು ಹೇಳಿದರು.
ಕೇವಲ ಹಣವೇ ಪ್ರಧಾನವಾದಾಗ ಆಡಳಿತದಲ್ಲಿ ಬಿಗಿ ತಪ್ಪುವುದು ಸಹಜ. ಹಾಗಾಗದಂತೆ ಎಚ್ಚರ ವಹಿಸಿ ನೂತನ ಮುಖ್ಯಮಂತ್ರಿಗಳು ಜನರ ಮನ್ನಣೆ ಗಳಿಸಲಿ ಎಂದು ಶುಭ ಹಾರೈಸಿದರು.
