ಶೃಂಗೇರಿ: ಮೇಯುವಾಗ 20 ಅಡಿ ಆಳದ ಬಾವಿಗೆ ಬಿದ್ದಿದ್ದ ಎರಡು ಎತ್ತುಗಳನ್ನು ಅಗ್ನಿಶಾಮಕ ಸಿಬ್ಬಂದಿಗಳ ಪ್ರಯತ್ನದಿಂದ ಮೇಲಕ್ಕತ್ತಿರುವ ಘಟನೆ ಶೃಂಗೇರಿ ತಾಲೂಕಿನ ಹಲಗಾರ್ ಆಲಂದೂರು ಗ್ರಾಮದಲ್ಲಿ ನಡೆದಿದೆ.
ಹೌದು .. ತಾಲೂಕಿನ ಹಲಗಾರ್–ಅಲಂದೂರು ರಸ್ತೆಯಲ್ಲಿರುವ ಕೃಷ್ಣಪ್ಪ ಅವರ ಜಾಗದ ಬಾವಿಗೆ ಬಿದ್ದಿದ್ದ ಎರಡು ಹೋರಿಗಳನ್ನು ಮೇಲಕ್ಕೆತ್ತಿದ್ದಾರೆ.
ಸುಮಾರು 10 ಅಡಿ ಅಗಲ ಹಾಗೂ 20 ಅಡಿ ಆಳದ ಬಾವಿಯಲ್ಲಿ ನೀರು ಮತ್ತು ಕೆಸರು ತುಂಬಿಕೊಂಡಿದ್ದರಿಂದ ಹೋರಿಗಳ ರಕ್ಷಣೆ ಕಾರ್ಯಾಚರಣೆ ಸವಾಲಿನದ್ದಾಗಿತ್ತು. ಮಾಹಿತಿ ತಿಳಿದ ಕೂಡಲೇ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ, ಪಶುವೈದ್ಯರು ಹಾಗೂ ಸ್ಥಳೀಯರ ಸಹಕಾರದೊಂದಿಗೆ ಹಗ್ಗ ಮತ್ತು ವಿಶೇಷ ರಕ್ಷಣಾ ಉಪಕರಣಗಳನ್ನು ಬಳಸಿ ಎರಡೂ ಹೋರಿಗಳನ್ನು ಸುರಕ್ಷಿತವಾಗಿ ಮೇಲಕ್ಕೆತ್ತುವಲ್ಲಿ ಯಶಸ್ವಿಯಾದರು.
ಕಾರ್ಯಾಚರಣೆಯಲ್ಲಿ ಶೃಂಗೇರಿ ಅಗ್ನಿಶಾಮಕ ಠಾಣೆಯ ಪ್ರಮುಖರಾದ ಸತೀಶ್, ರಾಜೇಶ್ ವಿ.ಜಿ., ಮೋಹನ್ ರಾಜ್, ಯಮನಪ್ಪ ಪಿ. ಛಲವಾದಿ, ಸುನಿಲ್ ಎಸ್. ತಂಡೇಲಾ ಹಾಗೂ ಶಿವಾನಂದ ವಿ. ಭಾಗವಹಿಸಿದ್ದರು.
ಕಾಲುದಾರಿಯಲ್ಲೇ ಇರುವ ತೆರೆದ ಬಾವಿಯನ್ನು ಈ ಕೂಡಲೇ ಮುಚ್ಚಿಸಬೇಕೆಂದು ಅಲ್ಲಿನ ಸ್ಥಳೀಯರು ಆಗ್ರಹಿಸಿದ್ದಾರೆ.
