ಹಾಸನ: ಅಪಘಾತದಲ್ಲಿ ಗಾಯಗೊಂಡಿದ್ದ ತನ್ನ ಅಜ್ಜನನ್ನು ಆಂಬ್ಯುಲೆನ್ಸ್ಲ್ಲಿ ಕರೆದೊಯ್ಯುವುದನ್ನು ನೋಡುತ್ತಾ ನಿಂತಿದ್ದ ಬಾಲಕನಿಗೆ ಕಾರು ಡಿಕ್ಕಿಯಾದ ಘಟನೆ ಸಕಲೇಶಪುರದ ಬಾಳೆಗದ್ದೆ ಗ್ರಾಮದ ಸಮೀಪ ನಡೆದಿದೆ. ಈ ಭೀಕರ ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಭವಿಷ್ (16) ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ಬಾಲಕ. ಭವಿಷ್ನ ಅಜ್ಜ ಸಿದ್ದರಾಜು ಅವರಿಗೆ ಬೈಕ್ ಡಿಕ್ಕಿಯಾಗಿ, ಗಾಯಗೊಂಡಿದ್ದರು. ಅವರನ್ನು ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿತ್ತು. ಈ ವೇಳೆ ತಾತನಿದ್ದ ಆಂಬ್ಯುಲೆನ್ಸ್ ಹೋಗುವುದನ್ನು ನೋಡುತ್ತಿದ್ದ ಬಾಲಕನಿಗೆ ಕಾರು ಡಿಕ್ಕಿಯಾಗಿದೆ. ಅಪಘಾತದ ಬಳಿಕ ಚಾಲಕ ಕಾರನ್ನು ನಿಲ್ಲಿಸದೇ ಅಲ್ಲಿಂದ ತೆರಳಿದ್ದಾನೆ.
ಆದರೆ, ಸಕಲೇಶಪುರ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿದ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಹಾಸನದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿತ್ತು. ಈ ವೇಳೆ ತುರ್ತು ವಾಹನ ಸಿದ್ದರಾಜು ಅವರ ಮನೆಯ ಬಳಿ ಬಂದಾಗ, ಅವಿನಾಶ್ ಪುತ್ರ ಭವಿಷ್ ಅಪಘಾತಗೊಂಡಿದ್ದ ತಾತನನ್ನು ನೋಡಿಕೊಂಡು ಅವರನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ಅಪ್ಪನಿಗೆ ಊಟ ಮತ್ತು ಬಟ್ಟೆ ಕೊಟ್ಟಿದ್ದಾನೆ. ಬಟ್ಟೆ ಕೊಟ್ಟು ವಾಪಸ್ ಮನೆಗೆ ಬರುವಾಗ ರಸ್ತೆ ಬದಿ ನಿಂತು ಅಪ್ಪ ಮತ್ತು ತಾತನಿಗೆ ಒಳ್ಳೆಯದಾಗಲಿ ಎಂದಿದ್ದಾನೆ. ಈ ವೇಳೆ ಎದುರಿನಿಂದ ಬಂದ ಕಾರೊಂದು ಭವಿಷ್ಗೆ ಡಿಕ್ಕಿ ಹೊಡೆದಿದೆ. ಹೀಗಾಗಿ, ಬಾಲಕನನ್ನು ಹಾಸನದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದೀಗ ಬಾಲಕ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾನೆ.
ಅಪಘಾತದ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಕಲೇಶಪುರ ನಗರ ಠಾಣೆಯಲ್ಲಿ ಹಿಟ್ ಆ್ಯಂಡ್ ರನ್ ಪ್ರಕರಣ ದಾಖಲಾಗಿದ್ದು, ಅಪಘಾತ ನಡೆಸಿದ ಕಾರಿನ ಮಾಲೀಕನಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.
