ಹಾಸನ: ಪ್ರೀತಿಸಿ ಮದುವೆಯಾಗಿದ್ದ ಪತ್ನಿಯ ಶೀಲ ಶಂಕಿಸಿದ ಪತಿಯೊಬ್ಬ ಆಕೆಯ ಉಸಿರುಗಟ್ಟಿಸಿ ಕೊಲೆ ಮಾಡಿದ ಘಟನೆ ಜಿಲ್ಲೆಯ ಬೇಲೂರು ತಾಲೂಕಿನ ಹುಲ್ಲೇನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಹೌದು .. ಯಶೋಧಾ (23) ಕೊಲೆಯಾದ ಪತ್ನಿ. ಪುನೀತ್ (28) ಕೊಲೆ ಮಾಡಿದ ಪತಿ. ಕಳೆದ ಏಳು ವರ್ಷಗಳ ಹಿಂದೆ ಯಶೋಧಾ ಮತ್ತು ಪುನೀತ್ ಒಬ್ಬರೊಬ್ಬರನ್ನು ಪ್ರೀತಿಸಿ ಮದುವೆಯಾಗಿದ್ದರು. ಒಂದೆರಡು ವರ್ಷಗಳ ಕಾಲ ಬಹಳ ಅನ್ಯೋನ್ಯತೆಯಿಂದ ಸಂಸಾರ ನಡೆಸುತ್ತಿದ್ದರು. ಆದರೆ, ಇತ್ತೀಚೆಗೆ ಪತ್ನಿಯ ಮೇಲೆ ಪತಿಗೆ ಅನುಮಾನ ಕಾಡಲಾರಂಭಿಸಿತ್ತು. ಇದನ್ನೇ ನೆಪ ಮಾಡಿಕೊಂಡು ಪುನೀತ್ ಜಗಳ ಪತ್ನಿಗೆಯ ಜೊತೆಗೆ ತೆಗೆಯುತ್ತಿದ್ದ. ಫೋನಿನಲ್ಲಿ ಪರಪುರುಷರ ಜೊತೆ ಮಾತನಾಡದಂತೆ ತಾಕೀತು ಕೂಡ ಮಾಡಿದ್ದ.
ಪತಿಯ ಅನುಮಾನದ ಕಿರುಕುಳಕ್ಕೆ ಬೇಸತ್ತಿದ್ದ ಪತ್ನಿ ಯಶೋಧಾ ಇತ್ತೀಚೆಗೆ ಮನೆಯಲ್ಲಿದ್ದ ಸೀಮೆ ಎಣ್ಣೆಯನ್ನು ಕುಡಿದು ಆತ್ಮಹತ್ಯೆಗೆ ಮುಂದಾಗಿದ್ದಳು. ಇದು ಗೊತ್ತಾಗಿ ಪುನೀತ್ ತಕ್ಷಣ ಪತ್ನಿಯನ್ನು ಹಾಸನದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದ. ಈ ಘಟನೆ ಬಳಿಕ ಯಶೋಧಾ ತನ್ನ ತವರು ಮನೆಯಲ್ಲಿಯೇ ಉಳಿದುಕೊಂಡಿದ್ದಳು. ಹಲವು ಬಾರಿ ಮನೆಗೆ ಬರುವಂತೆ ಪುನೀತ್ ಕರೆದರೂ ಮನೆಗೆ ಹೋಗದೇ ಹಾಸನದ ಖಾಸಗಿ ಕಂಪನಿಯಲ್ಲಿ ಕೆಲಸಕ್ಕೆ ಸೇರಿ ತನ್ನ ಮಗಳನ್ನು ಓದಿಸಿಕೊಂಡು ಜೀವನ ನಡೆಸುತ್ತಿದ್ದಳು.
ಜೂನ್ 24ರ ಸಂಜೆ ಪತ್ನಿ ಇದ್ದ ಮನೆಗೆ ಬಂದಿದ್ದ ಪುನೀತ್, ಮನೆಗೆ ಬರುವಂತೆ ಪುನಃ ಒತ್ತಾಯ ಮಾಡಿದ್ದಾನೆ. ನಿನ್ನ ಮನೆಗೆ ಬರುವುದಿಲ್ಲ ಎಂದು ಪತ್ನಿಯು ಪಟ್ಟು ಹಿಡಿದ್ದರಿಂದ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಗಲಾಟೆ ನಡೆದಿದೆ. ಗಲಾಟೆ ನೋಡಿದ ಅಕ್ಕ – ಪಕ್ಕದ ಮನೆಯವರು, ಜಗಳ ಬಿಡಿಸಿ ಇಬ್ಬರನ್ನೂ ಸಮಾಧಾನ ಮಾಡಿ ತೆರಳಿದ್ದರು. ಇದಾದ ಬಳಿಕ ಸಮಾಧಾನಗೊಳ್ಳದ ಪುನೀತ್, ತಮ್ಮ ಪುತ್ರಿಯನ್ನು ಹಗ್ಗದಿಂದ ಉಸಿರುಗಟ್ಟಿಸಿ ಕೊಲೆ ಮಾಡಿರುವುದು ತಿಳಿದು ಬಂದಿದೆ ಎಂದು ಮೃತ ಯಶೋಧಾಳ ಪೋಷಕರು ಆರೋಪಿಸಿ ದೂರು ನೀಡಿದ್ದಾರೆ.
