ಚಿಕ್ಕಮಗಳೂರು: ಕಳಸ ತಾಲೂಕಿನ ಸಮುದಾಯ ಆರೋಗ್ಯ ಕೇಂದ್ರದ ಸಮೀಪದಲ್ಲಿ ಅತ್ಯಂತ ಅಪರೂಪದ ಪುನುಗು ಬೆಕ್ಕೊಂದು ಕಾಣಿಸಿಕೊಂಡಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಅದನ್ನು ರಕ್ಷಿಸಿ, ಸುರಕ್ಷಿತವಾಗಿ ಕಾಡಿಗೆ ಬಿಟ್ಟಿದ್ದಾರೆ.
ಸಮೀಪದ ತೋಟವೊಂದರಿಂದ ನಾಯಿಗಳು ಬೆನ್ನಟ್ಟಿಕೊಂಡು ಬಂದ ಕಾರಣ ಭಯಗೊಂಡ ಪುನುಗು ಬೆಕ್ಕು ಆರೋಗ್ಯ ಕೇಂದ್ರದ ಆವರಣದ ಬಳಿ ಆಶ್ರಯ ಪಡೆದಿತ್ತು. ಸ್ಥಳೀಯರು ಕೂಡಲೇ ವನ್ಯಜೀವಿ ರಕ್ಷಕ ಸ್ನೇಕ್ ರಿಜ್ವಾನ್ ಅವರಿಗೆ ಮಾಹಿತಿ ನೀಡಿದ್ದರು. ಮಾಹಿತಿ ಪಡೆದ ತಕ್ಷಣವೇ ಸ್ಥಳಕ್ಕೆ ಧಾವಿಸಿದ ಸ್ನೇಕ್ ರಿಜ್ವಾನ್ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಬೆಕ್ಕನ್ನು ರಕ್ಷಿಸಿದ್ದಾರೆ.
ನಾಯಿಗಳ ದಾಳಿಯಿಂದ ಪ್ರಾಣಿಗೆ ಸಣ್ಣಪುಟ್ಟ ಗಾಯಗಳಾಗಿದ್ದ ಹಿನ್ನೆಲೆ ಅದಕ್ಕೆ ಸ್ಥಳೀಯ ಪಶು ವೈದ್ಯಾಲಯದಲ್ಲಿ ಅಗತ್ಯ ಚಿಕಿತ್ಸೆ ನೀಡಲಾಗಿದೆ. ವೈದ್ಯರ ಮೇಲ್ವಿಚಾರಣೆಯಲ್ಲಿ ಚಿಕಿತ್ಸೆ ಪಡೆದ ಬಳಿಕ ಪುನುಗು ಬೆಕ್ಕು ಸಂಪೂರ್ಣವಾಗಿ ಚೇತರಿಸಿಕೊಂಡಿರುವುದನ್ನು ಖಚಿತಪಡಿಸಿಕೊಂಡ ಅರಣ್ಯ ಇಲಾಖೆ ಅಧಿಕಾರಿಗಳು, ಅದನ್ನು ದಟ್ಟ ಅರಣ್ಯ ಪ್ರದೇಶಕ್ಕೆ ಬಿಟ್ಟು ಬಂದಿದ್ದಾರೆ.
