ಮೂಡಿಗೆರೆ: ಪಟ್ಟಣದ ಅಡ್ಯಾಂತಯ ರಂಗಮಂದಿರದಲ್ಲಿ ಹಿಂದೂ ಮುಖಂಡ ದಿವಂಗತ ಭರತ್ ಕನ್ನಳ್ಳಿ ಅವರ ಪುಣ್ಯಸ್ಮರಣೆ ಕಾರ್ಯಕ್ರಮವನ್ನು ಮೂಡಿಗೆರೆ ಸಾರ್ವಜನಿಕ ಗಣಪತಿ ಸೇವಾ ಸಮಿತಿ ವತಿಯಿಂದ ಭಾವಪೂರ್ಣವಾಗಿ ನಡೆಸಲಾಯಿತು. ಈ ಸಂದರ್ಭದಲ್ಲಿ ಗಣ್ಯರು ಭರತ್ ಕನ್ನಳ್ಳಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಗೌರವ ಸಮರ್ಪಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ವಿಧಾನ ಪರಿಷತ್ ಉಪಸಭಾಪತಿ ಎಂ.ಕೆ. ಪ್ರಾಣೇಶ್, ಭರತ್ ಕನ್ನಳ್ಳಿ ಅವರ ಸಮಾಜಸೇವೆ ಹಾಗೂ ಜನಪರ ಕಾಳಜಿ ಯುವ ಪೀಳಿಗೆಗೆ ಮಾದರಿಯಾಗಬೇಕು ಎಂದು ಹೇಳಿದರು. ಅವರ ಕುಟುಂಬದೊಂದಿಗೆ ನಾವು ಸದಾ ಇರುತ್ತೇವೆ. ಮುಂದಿನ ದಿನಗಳಲ್ಲಿ ಅವರ ಸ್ಮರಣಾರ್ಥ ಮೂಡಿಗೆರೆಯ ಸಾರ್ವಜನಿಕರಿಗೆ ಉಪಯೋಗವಾಗುವ ಶಾಶ್ವತ ಸೇವಾ ಕಾರ್ಯವನ್ನು ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಮೂಡಿಗೆರೆ ಸಾರ್ವಜನಿಕ ಗಣಪತಿ ಸೇವಾ ಸಮಿತಿಯ ಅಧ್ಯಕ್ಷ ಅನುಪ್ ಕುಮಾರ್ ಮಾತನಾಡಿ, ಭರತ್ ಕನ್ನಳ್ಳಿ ಅವರೊಂದಿಗಿನ ಆತ್ಮೀಯ ಒಡನಾಟವನ್ನು ಸ್ಮರಿಸಿ, ಅವರ ಸರಳತೆ, ಸ್ನೇಹಪರ ವ್ಯಕ್ತಿತ್ವ ಹಾಗೂ ಸಮಾಜಮುಖಿ ಚಟುವಟಿಕೆಗಳನ್ನು ನೆನಪಿಸಿಕೊಂಡರು.
ಕಾರ್ಯಕ್ರಮದಲ್ಲಿ ಪ್ರದೀಪ್ ಮುಗ್ರಳ್ಳಿ, ದೀಪಕ್ ದೊಡ್ಡಯ್ಯ, ಎಂ.ಪಿ. ಕುಮಾರಸ್ವಾಮಿ, ಬಿ.ಬಿ. ನಿಂಗಯ್ಯ, ಬ್ರಿಜೇಶ್ ಕಡದಾಳ್, ಕಣಚೂರ್ ವಿನೋದ್ ಸೇರಿದಂತೆ ಹಲವರು ಉಪಸ್ಥಿತರಿದ್ದು, ಭರತ್ ಕನ್ನಳ್ಳಿ ಅವರ ಅಗಲಿಕೆಗೆ ಶ್ರದ್ಧಾಂಜಲಿ ಸಲ್ಲಿಸಿದರು.
