ಹಾಸನ: ಜಡಿ ಮಳೆ ಮತ್ತು ಗಾಳಿಗೆ ಬೃಹತ್ ತಡೆಗೋಡೆಯೊಂದು ಕುಸಿದು 2 ವಾಸದ ಮನೆಗಳು ಜಖಂಗೊಂಡಿರುವ ಘಟನೆ ಹಾಸನ ಜಿಲ್ಲೆ ಸಕಲೇಶಪುರ ಪಟ್ಟಣದ ಅರೇಹಳ್ಳಿ ಬೀದಿಯ ಡಾಲರ್ಸ್ ಕಾಲೋನಿಯಲ್ಲಿ ನಡೆದಿದೆ.
ರೈಟ್ ಡೆವಲಪರ್ಸ್ನವರು ನೂತನವಾಗಿ ನಿರ್ಮಿಸುತ್ತಿದ್ದ ಬಡಾವಣೆಗೆ ಮಣ್ಣು ಕುಸಿಯದಂತೆ 25 ಅಡಿ ಉದ್ದ, 150 ಮೀಟರ್ ತಡೆಗೋಡೆ ನಿರ್ಮಾಣ ಮಾಡಲಾಗಿದ್ದು, ನಿರ್ಮಾಣ ಕಾಮಗಾರಿ ಮುಂದುವರಿದಿತ್ತು. ಕಳೆದ ಎರಡು ದಿನಗಳಿಂದ ಭಾರೀ ಗಾಳಿ ಸಹಿತ ಸುರಿಯುತ್ತಿರುವ ಮಳೆಗೆ ತಡೆಗೋಡೆ ಕುಸಿದಿದೆ.
ತಡೆಗೋಡೆ ಕುಸಿದ ಪರಿಣಾಮ ಮಧು, ಅಬ್ದುಲ್ ಮುನಾಫ್ ಎಂಬುವವರ ಮನೆಗಳು ಜಖಂಗೊಂಡಿದೆ. ಘಟನೆ ವೇಳೆ ಎರಡೂ ಮನೆಯ ಕುಟುಂಬಸ್ಥರು ಮನೆಯೊಳಗೆ ಮಲಗಿದ್ದರು. ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸಕಲೇಶಪುರ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.
