ಹಾಸನ : ಬೇಲೂರಿನ ಶ್ರೀ ಚೆನ್ನಕೇಶವ ದೇವಾಲಯದಲ್ಲಿ ಬುಧವಾರ ನಡೆದ ಹುಂಡಿ ಎಣಿಕೆ ಕಾರ್ಯದ ವೇಳೆ ಸುಮಾರು ₹1.98 ಲಕ್ಷ ಹಣವನ್ನು ಎಗರಿಸಲು ಯತ್ನಿಸಿದ ಘಟನೆ ನಡೆದಿದೆ. ಪೊಲೀಸರ ಸಮಯೋಚಿತ ಕಾರ್ಯಾಚರಣೆಯಿಂದ ಕಳ್ಳತನದ ಯತ್ನ ವಿಫಲವಾಗಿದೆ.
ದೇಗುಲದ ಹುಂಡಿ ಹಣ ಎಣಿಕೆ ಕಾರ್ಯ ಪ್ರತಿ ನಾಲ್ಕು ತಿಂಗಳಿಗೊಮ್ಮೆ ನಡೆಯುತ್ತದೆ. ಅದರಂತೆ ತಹಶೀಲ್ದರ್ ಶ್ರೀಧರ್ ಕಂಕಣವಾಡಿ ಹಾಗೂ ಕಾರ್ಯನಿರ್ವಹಣಾಧಿಕಾರಿ ಯೊಗೇಶ್ ಅವರ ನೇತೃತ್ವದಲ್ಲಿ ಹುಂಡಿ ಎಣಿಕೆಗೆ ಚಾಲನೆ ನೀಡಲಾಗಿತ್ತು.
ಬೆಳಗ್ಗೆ 10.30ಕ್ಕೆ ಗರ್ಭಗುಡಿಯ ಹುಂಡಿ ತೆಗೆದು ಹಣ ಎಣಿಸಲು ಕಲ್ಯಾಣ ಮಂಟಪಕ್ಕೆ ತಂದು ಸುರಿಯುತ್ತಿದ್ದ ವೇಳೆ ಅನಾಮಧೇಯ ವ್ಯಕ್ತಿಯೊಬ್ಬ ಹಣ ಕಳ್ಳತನಕ್ಕೆ ಯತ್ನಿಸಿದ್ದು, ಸ್ಥಳದಲ್ಲಿದ್ದ ಪೊಲೀಸರ ಸಮಯೋಚಿತ ಕಾರ್ಯಾಚರಣೆಯಿಂದ ಖದೀಮನನ್ನು ವಶಕ್ಕೆ ಪಡೆದಿದ್ದಾರೆ.
ಪ್ರತಿ ಬಾರಿಯಂತೆ ಈ ಸಲವೂ ವಿಡಿಯೋ ಚಿತ್ರೀಕರಣ ಜೊತೆಗೆ ಸರ್ವೋದಯ ವಿದ್ಯಾ ಸಂಸ್ಥೆ ವಿದ್ಯಾರ್ಥಿಗಳು, ಬ್ಯಾಂಕಿನ ಸಿಬ್ಬಂದಿ, ದೇಗುಲದ ನೌಕರರು ಒಗ್ಗೂಡಿ ಎಣಿಕೆ ಕಾರ್ಯ ಮಾಡುತ್ತಿದ್ದರು. ಈ ವೇಳೆ, ಏಕಾಏಕಿ ನುಗ್ಗಿದ ಆರೋಪಿಯು ಹುಂಡಿಯಿಂದ ಹಣ ಕಳವು ಮಾಡಲು ಯತ್ನಿಸಿದ್ದಾನೆ. ಈ ವೇಳೆ ಮಾಹಿತಿ ಪಡೆದ ಪೊಲೀಸರು, ಸ್ಥಳಕ್ಕೆ ಧಾವಿಸಿ ಆರೋಪಿಯನ್ನು ವಶಕ್ಕೆ ಪಡೆದು ಆತನಿಂದ ಒಟ್ಟು ₹1.98 ನಗದು ಹಣವನ್ನು ವಶಪಡಿಸಿಕೊಂಡಿದ್ದಾರೆ ಎಂದು ದೇವಾಲಯದ ಕಾರ್ಯನಿರ್ವಹಣಾಧಿಕಾರಿ ಯೋಗೇಶ್ ಮಾಹಿತಿ ನೀಡಿದ್ದಾರೆ.
ಬೇಲೂರು ತಹಶೀಲ್ದಾರ್ ಶ್ರೀಧರ್ ಕಂಕನವಾಡಿ ಮಾತನಾಡಿ, ಪ್ರತಿ ಸಲದಂತೆ ಈ ಬಾರಿಯೂ ಹುಂಡಿ ಹಣ ಎಣಿಕೆ ಸಂದರ್ಭದಲ್ಲಿ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿತ್ತು. ಈ ವೇಳೆ, ಅನಾಮಧೇಯ ವ್ಯಕ್ತಿಯೊಬ್ಬ, ಸುರಿಯುತ್ತಿದ್ದ ಹಣವನ್ನು ಯಾರಿಗೂ ತಿಳಿಯದ ಹಾಗೆ ಸುಮಾರು 1.98 ಲಕ್ಷ ಹಣವನ್ನು ಜರ್ಕಿನ್ ಒಳಗಡೆ ಹಾಕುತ್ತಿದ್ದ. ಎಣಿಕೆ ಕಾರ್ಯದಲ್ಲಿ ನಿರತರಾಗಿದ್ದ ಸಿಬ್ಬಂದಿಗೆ ಆತನ ನಡೆ ಬಗ್ಗೆ ಅನುಮಾನ ಬಂದಿದ್ದು, ತಕ್ಷಣ ಹಿಡಿದು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ, ಆತನ ಬಳಿ ಹಣ ಪತ್ತೆಯಾಗಿದೆ. ಸದ್ಯ ಆರೋಪಿಯನ್ನು ಪೊಲೀಸರಿಗೆ ಒಪ್ಪಿಸಲಾಗಿದೆ ಎಂದು ತಿಳಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಬೇಲೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಆರೋಪಿಯ ವಿಚಾರಣೆ ನಡೆಸಲಾಗುತ್ತಿದೆ. ಕಳ್ಳತನದ ಯತ್ನದ ಹಿಂದಿನ ಉದ್ದೇಶ ಹಾಗೂ ಇತರರ ಕೈವಾಡವಿದೆಯೇ ಎಂಬ ಬಗ್ಗೆ ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
