ಚಿಕ್ಕಮಗಳೂರು: ಜಮೀನಿನ ಅಭಿವೃದ್ಧಿ ಹಾಗೂ ಬೆಳೆಗೆ ಮಾಡಿದ್ದ ಸಾಲವನ್ನು ತೀರಿಸಲಾಗದೆ ತೀವ್ರವಾಗಿ ಕೊರಗುತ್ತಿದ್ದ ಕನ್ನೇನಹಳ್ಳಿಯ ರೈತರೊಬ್ಬರು ನೆರೆಯವರ ತೋಟದ ಮನೆಯ ಹಿಂಭಾಗ ಬೆಂಕಿ ಹಚ್ಚಿಕೊಂಡು ಸಂಶಯಾಸ್ಪದವಾಗಿ ಸಾವನ್ನಪ್ಪಿರುವ ದುರಂತ ಘಟನೆ ವರದಿಯಾಗಿದೆ.
ಮೃತರನ್ನು ವಿಷ್ಣುಕುಮಾರ್ ಎಂದು ಗುರುತಿಸಲಾಗಿದ್ದು, ಅವರ ಪತ್ನಿ ಸುಧಾ ಕೆ.ಎನ್. ಕಡೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಜಮೀನಿನಲ್ಲಿ ಸರಿಯಾದ ಬೆಳೆ ಬಾರದೆ ಹಾಗೂ ಬೋರ್ವೆಲ್ಗಳಲ್ಲಿ ನೀರಿಲ್ಲದ ಕಾರಣ ವಿಷ್ಣುಕುಮಾರ್ ಅವರು ತೀವ್ರ ಸಾಲದ ಸುಳಿಗೆ ಸಿಲುಕಿದ್ದರು ಎನ್ನಲಾಗಿದೆ. ಜುಲೈ 7ರ ಬೆಳಗ್ಗೆ 11:00 ಗಂಟೆಗೆ ಜಮೀನಿಗೆ ಹೋದವರು ವಾಪಸ್ ಬಂದಿರಲಿಲ್ಲ.
ಸಂಜೆ ವೇಳೆ ಪಕ್ಕದ ತೋಟದ ಮನೆಯ ಹಿಂಭಾಗದಲ್ಲಿ ಬೆಂಕಿಯ ಹೊಗೆ ಬರುತ್ತಿರುವುದು ಹಾಗೂ ವಿಷ್ಣುಕುಮಾರ್ ಅವರ ಬೈಕ್ ನಿಂತಿರುವುದು ಕಂಡುಬಂದಿದೆ. ಸ್ಥಳಕ್ಕೆ ಹೋಗಿ ನೋಡಿದಾಗ ಮನುಷ್ಯನ ದೇಹ ಸಂಪೂರ್ಣ ಸುಟ್ಟು ಕರಕಲಾಗಿರುವುದು ಪತ್ತೆಯಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಸಾಲದ ಬಾಧೆಯಿಂದ ಮನನೊಂದು ಅವರೇ ಬೆಂಕಿ ಹಚ್ಚಿಕೊಂಡಿರಬಹುದು ಎಂದು ಪತ್ನಿ ಅನುಮಾನ ವ್ಯಕ್ತಪಡಿಸಿದ್ದು, ಸ್ಥಳ ಪರಿಶೀಲನೆ ನಡೆಸಿ ಸೂಕ್ತ ತನಿಖೆ ನಡೆಸುವಂತೆ ಹಾಗೂ ಸರ್ಕಾರದಿಂದ ಪರಿಹಾರ ಕೊಡಿಸುವಂತೆ ವಿನಂತಿಸಿದ್ದಾರೆ. ಕಡೂರು ಪೊಲೀಸರು ಯು.ಡಿ.ಆರ್ (UDR) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
