ಕಳಸ : ವರುಣನ ರೌದ್ರ ನರ್ತನಕ್ಕೆ ಬಡ ಕುಟುಂಬ ಬೀದಿಗೆ ಬಂದು ನಿಂತಿದೆ. ಮಳೆರಾಯನ ಅಬ್ಬರಕ್ಕೆ ಮೈದುಂಬಿದ ಭದ್ರೆ ತನ್ನ ಉಗ್ರ ಸ್ವರೂಪ ಪ್ರದರ್ಶಿಸಿದ್ದು, ನೀರಿನ ರಭಸಕ್ಕೆ ಬಡಕುಟುಂಬ ಒಂದರ ತೋಟ ಸಂಪೂರ್ಣ ನೀರು ಪಾಲಾಗಿದೆ.ಭದ್ರೆಯ ಅಬ್ಬರಕ್ಕೆ ಕಾಫಿ, ಅಡಿಕೆ, ಬಾಳೆ, ಏಲಕ್ಕಿ ಗಿಡಗಳು ಕೊಚ್ಚಿ ಹೋಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಸಂಸೆ ಸಮೀಪದ ಹೊಸಮಠ ಗ್ರಾಮದಲ್ಲಿ ನಡೆದಿದೆ.
ಹೌದು .. ಅಶೋಕ್ ಎಂಬುವರ ಕೃಷಿ ತೋಟಕ್ಕೆ ನುಗ್ಗಿದ್ದ ಭದ್ರಾ ನದಿ ನೀರು ಬದುಕನ್ನು ಮೂರಾಬಟ್ಟೆಗೊಳಿಸಿದೆ.ಕಾಫಿ, ಅಡಿಕೆ ಸಸಿಗಳು ಬುಡ ಸಮೇತ ಕಿತ್ತು ಬಂದಿದ್ದು, ಮಣ್ಣು ಕೊಚ್ಚಿ ಹೋದ ಪರಿಣಾಮ ಫಸಲಿಗೆ ಬಂದಿದ್ದ ಕಾಫಿ ಗಿಡಗಳು ನಾಶವಾಗಿವೆ.ಕೃಷಿ ಕಾರ್ಮಿಕರಾದ ಇವರು ಧರ್ಮಸ್ಥಳ ಸಂಘದಲ್ಲಿ ಸಾಲ ಮಾಡಿ ತೋಟ ಮಾಡಿದ್ದು, ತೋಟದ ಸದ್ಯದ ಸ್ಥಿತಿ ಕಂಡು ಅಶೋಕ್ ದಂಪತಿ ಕಣ್ಣೀರಿಟ್ಟಿದ್ದಾರೆ.

ಪ್ರವಾಹದಂತೆ ನುಗ್ಗಿದ ಭದ್ರಾ ನದಿ ನೀರಿನಿಂದ ಇಡೀ ತೋಟ ನಾಶವಾಗಿದೆ.ತೋಟದ ಜೊತೆ ಮನೆಗೂ ನುಗ್ಗಿದ ಮಳೆ ನೀರು, ಗೃಹಪಯೋಗಿ ವಸ್ತುಗಳನ್ನು ಹಾನಿ ಮಾಡಿದೆ.ಸರ್ಕಾರ ಸೂಕ್ತ ಪರಿಹಾರ ನೀಡುವಂತೆ ಅಶೋಕ್ ಹಾಗೂ ಗ್ರಾಮಸ್ಥರು ಮನವಿ ಮಾಡಿದ್ದಾರೆ.
