ಚಿಕ್ಕಮಗಳೂರು: ಮಲೆನಾಡು, ಕರಾವಳಿ ಭಾಗದಲ್ಲಿ ಕೋಮುವಾದಿ ಶಕ್ತಿಗಳಿಗೆ ಎದುರಾಗಿ, ಚಿಕ್ಕಮಗಳೂರು ಜಿಲ್ಲೆಯಲ್ಲಿ ಐದಕ್ಕೆ ಐದು ಸ್ಥಾನಗಳಲ್ಲೂ ಜನ ಕಾಂಗ್ರೆಸ್ ಶಾಸಕರನ್ನು ಗೆಲ್ಲಿಸಿದ್ದಾರೆ. 2 ವಿಧಾನ ಪರಿಷತ್ತು ಸದಸ್ಯರು ಒಟ್ಟು ಜಿಲ್ಲೆಯಲ್ಲಿ 7 ಶಾಸಕರು ಇದ್ದು ಒಂದು ಸಚಿವ ಸ್ಥಾನ ಕೊಟ್ಟಿಲ್ಲ ಜಿಲ್ಲೆಗೆ ತುಂಬಾ ಅನ್ಯಾಯ ಎಂದು ಮಲೆನಾಡು ಕರಾವಳಿ ಜನಪರ ಒಕ್ಕೂಟದ ಮುಖಂಡರಾದ ಅನಿಲ್ ಹೊಸಕೊಪ್ಪ ಹೇಳಿದ್ದಾರೆ.
ಕಾರ್ಯಕರ್ತರ ಹೋರಾಟ ಒಳಗೊಂಡಂತೆ ಪ್ರಜ್ಞಾವಂತರ ಕಾರ್ಯಕ್ರಮಗಳಿಂದ ಜಿಲ್ಲೆಯಲ್ಲಿ ಕಾಂಗ್ರೆಸ್ ಸದೃಢವಾಗಿ, ಗೆಲುವಿನ ನಗೆ ಬೀರಿದ ಈ ಸಂದರ್ಭದಲ್ಲಿ ಜಿಲ್ಲೆಗೆ ಒಂದು ಸಚಿವ ಸ್ಥಾನ ಕೊಡಲೇಬೇಕು ಅದರಲ್ಲೂ ಹಿರಿಯರಾದ ರಾಜೇಗೌಡರಿಗೆ ಕೊಡಲೇ ಬೇಕಿತ್ತು ಎಂದು ತಮ್ಮ ಅಸಮಾಧಾನವನ್ನು ಹೊರಹಾಕಿದರು.
ಮಲೆನಾಡಿನಲ್ಲಿ ಅನೇಕ ಸಮಸ್ಯೆಗಳು ರಾರಾಜಿಸುತ್ತಿವೆ, ನೂರಾರು ವರ್ಷಗಳಿಂದ ಬದುಕಿ ಬಾಳುತ್ತಿರುವ ನೆಲವಾಸಿಗಳ ಭೂಮಿ ಹಕ್ಕು, ವನ್ಯ ಜೀವಿಗಳಿಂದ ಬೆಳೆ ಹಾನಿ, ಅಡಕೆ ತೋಟಗಳಿಗೆ ರೋಗ, ರಸ್ತೆಗಾಗಿ ಅರಣ್ಯ ಸಮಸ್ಸೆ, ಹೀಗೆ ಅನೇಕ ಸಮಸ್ಸೆಗಳ ಗೂಡಾಗಿವೆ. ಆರು ಜಿಲ್ಲೆಗಳ್ನು ಒಳಗೊಂಡ ಮಲೆನಾಡು ಕರಾವಳಿ ನಾಡಿನ ಪ್ರಮುಖ ಪ್ರದೇಶ. ಅದರಲ್ಲೂ ಶೃಂಗೇರಿ ಕ್ಷೇತ್ರ ಹೆಚ್ಚು ಮಹತ್ವ ಪಡೆದುಕೊಂಡಿದೆ.
ಕಾಂಗ್ರೆಸ್ ಸರ್ಕಾರದಲ್ಲಿ ಡಿ.ಬಿ. ಚಂದ್ರೆಗೌಡರ ನಂತರ ಯಾರು ಶೃಂಗೇರಿ ಕ್ಷೇತ್ರದಲ್ಲಿ ಸಚಿವರಾಗಿಲ್ಲ. ಬಿಜೆಪಿ ಪ್ರಾಬಲ್ಯದ ಹೊರತಾಗಿಯೂ ಶೃಂಗೇರಿ ಕ್ಷೇತ್ರದಲ್ಲಿ ಟಿ.ಡಿ. ರಾಜೇಗೌಡರು ಎರಡು ಬಾರಿ ಶಾಸಕರಾಗಿದ್ದಾರೆ. ಈ ಬಾರಿಯ ಹೊಸ ಸಂಪುಟದಲ್ಲಿ ಶೃಂಗೇರಿ ಕ್ಷೇತ್ರದ ಶಾಸಕರಾದ ಟಿ ಡಿ ರಾಜೇಗೌಡರಿಗೆ ಸಚಿವ ಸ್ಥಾನ ನೀಡಬೇಕು ಎಂದು ತಮ್ಮ ಅಭಿಪ್ರಾಯವನ್ನು ತಿಳಿಸಿದರು.
ಮಲೆನಾಡು ಹಾಗೂ ಕರಾವಳಿ ಬಗ್ಗೆ ಅಪಾರ ಅನುಭವ ಹೊಂದಿರುವ ರಾಜೇಗೌಡರಿಗೆ ಸಚಿವ ಸ್ಥಾನ ನೀಡಿ, ಅರಣ್ಯ ಖಾತೆಯನ್ನೇ ಕೊಟ್ಟು, ಈ ಭಾಗದಲ್ಲಿ ಜನರನ್ನು ಕಾಡುತ್ತಿರುವ ಅರಣ್ಯ ಭೂಮಿ, ವನ್ಯ ಜೀವಿಗಳ ಸಂಘರ್ಷ ಇನ್ನಿತರ ಪ್ರಮುಖ ಸಮಸ್ಯೆಗಳನ್ನು ಬಗೆ ಹರಿಸಲು ನಮ್ಮ ಜಿಲ್ಲೆಗೆ ಸಚಿವ ಸ್ಥಾನ ಕೊಡಬೇಕು ಒತ್ತಾಯಿಸುತ್ತೇವೆ ಎಂದು ಅನಿಲ್ ಹೊಸಕೊಪ್ಪ ಆಗ್ರಹ ಪಡಿಸಿದ್ದಾರೆ.
