ಚಿಕ್ಕಮಗಳೂರು: 2023ರಲ್ಲಿ ಮಾನ್ಯಗೊಂಡು 2026ರಲ್ಲಿ ಅಮಾನ್ಯಗೊಂಡು ಶಾಸಕರೇ ಬದಲಾಗಿ ರಾಜ್ಯಾದ್ಯಂತ ತೀವ್ರ ಸಂಚಲನ ಮೂಡಿಸಿದ್ದ ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತ ಮರು ಎಣಿಕೆ ವಿವಾದ ಕುರಿತಂತೆ ಇಂದು ಸುಪ್ರೀಂ ಕೋರ್ಟ್ನಲ್ಲಿ ವಿಚಾರಣೆ ನಡೆಯಲಿದೆ.
3 ವರ್ಷ ಶಾಸಕರಾಗಿದ್ದ ಕಾಂಗ್ರೆಸ್ಸಿನ ರಾಜೇಗೌಡ ರಾತ್ರೋರಾತ್ರಿ ಅಧಿಕಾರ ಕಳೆದುಕೊಂಡಿದ್ದರು. 3 ವರ್ಷ ನ್ಯಾಯಾಲಯದಲ್ಲಿ ಹೋರಾಡಿದ್ದ ಬಿಜೆಪಿಯ ಜೀವರಾಜ್ ಮೂರು ದಿನಕ್ಕೆ ಶಾಸಕರಾಗಿದ್ದರು. ಕಾಲಚಕ್ರ ತಿರುಗಿ ಮತ್ತದೇ ರಾಜೇಗೌಡ ಕೋರ್ಟಿಗೆ ಹೋಗಿ ಶಾಸಕ ಸ್ಥಾನ ಉಳಿಸಿಕೊಂಡಿದ್ದರು. ಇದೇ ಪ್ರಕರಣ ಸಂಬಂಧ ಇಂದು ಮತ್ತೆ ವಿಚಾರಣೆ ನಡೆಯಲಿದೆ.
2023ರ ಸಾರ್ವತ್ರಿಕ ವಿಧಾನಸಭೆ ಚುನಾವಣಾ ಫಲಿತಾಂಶದಲ್ಲಿ ಶೃಂಗೇರಿಯ ಕಾಂಗ್ರೆಸ್ ಅಭ್ಯರ್ಥಿ ಟಿ.ಡಿ.ರಾಜೇಗೌಡ 201 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಪ್ರತಿಸ್ಪರ್ಧಿ ಬಿಜೆಪಿಯ ಡಿ.ಎನ್.ಜೀವರಾಜ್ ಅಂಚೆ ಮತಗಳ ಮರು ಎಣಿಕೆಗೆ ಪಟ್ಟು ಹಿಡಿದು, ಕೋರ್ಟ್ ಮೊರೆ ಹೋಗಿದ್ದರು. 3 ವರ್ಷಗಳ ಕಾಲ ಸುದೀರ್ಘ ವಿಚಾರಣೆ ನಡೆದು ಅಂತಿಮವಾಗಿ ಹೈಕೋರ್ಟ್ ಅಂಚೆ ಮತಗಳ ಮರು ಮತಗಳ ನಡೆಸಿ ಫಲಿತಾಂಶ ಪ್ರಕಟಿಸುವಂತೆ ಆದೇಶಿಸಿತ್ತು. ಹೈ ಆದೇಶದಂತೆ ಮೇ 2ರಂದು ನಡೆದ ಅಂಚೆ ಮತಗಳ ಮರು ಎಣಿಕೆಯಲ್ಲಿ ಬಿಜೆಪಿಯ ಡಿ.ಎನ್.ಜೀವರಾಜ್ 52 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. 3 ವರ್ಷ ಶಾಸಕರಾಗಿದ್ದ ಕಾಂಗ್ರೆಸ್ಸಿನ ರಾಜೇಗೌಡ 255 ಮತಗಳಿಂದ ಸೋತಿದ್ದರು. ಡಿ.ಎನ್.ಜೀವರಾಜ್ ಪ್ರಮಾಣ ವಚನ ಕೂಡ ಸ್ವೀಕರಿಸಿದ್ದರು.
ಆದರೆ ಹೈಕೋರ್ಟ್ ಆದೇಶದಂತೆ ನಡೆದ ಅಂಚೆ ಮತ ಮರು ಎಣಿಕೆ ಫಲಿತಾಂಶದ ಬಗ್ಗೆ ಪರಾಜಿತ ಅಭ್ಯರ್ಥಿ ಟಿ.ಡಿ.ರಾಜೇಗೌಡ ಸುಪ್ರೀಂ ಕೋರ್ಟ್ ಕದ ಬಡಿದಿದ್ದರು. ಸುಪ್ರೀಂ ಕೋರ್ಟ್ ಹೈಕೋರ್ಟ್ ಆದೇಶಕ್ಕೆ ಬ್ರೇಕ್ ಹಾಕಿ ಟಿ.ಡಿ.ರಾಜೇಗೌಡ ಶಾಸಕ ಸ್ಥಾನ ಮುಂದುವರಿಸುವಂತೆ ಆದೇಶಿಸಿತ್ತು. ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ್ದ ಬಿಜೆಪಿಯ ಜೀವರಾಜ್ ಮೂರೇ ದಿನಕ್ಕೆ ಮತ್ತೆ ಅಧಿಕಾರ ಕಳೆದುಕೊಂಡಿದ್ದರು.
ಮೇ 2ರಂದು ಮರುಮತ ಎಣಿಕೆ ನಡೆದ ಚಿಕ್ಕಮಗಳೂರಿನ ಐ.ಡಿ.ಎಸ್.ಜಿ. ಕಾಲೇಜು ಆವರಣ ಕೈ-ಕಮಲ ಕಾರ್ಯಕರ್ತರಿಂದ ಜಗಮಗಿಸುತ್ತಿತ್ತು. ಶಾಸಕ ರಾಜೇಗೌಡ ನಾನೇ ಗೆದ್ದೆ ಅಂತ ಸಂಜೆ 4 ಗಂಟೆಗೆ ಪಟಾಕಿ ಸಿಡಿಸಿ ಸಂಭ್ರಮಿಸಿದ್ರೆ, ಮಧ್ಯರಾತ್ರಿ ಜೀವರಾಜ್ 255 ಮತಗಳ ಅಂತರದ ಗೆಲುವಿನ ನಗೆ ಬೀರಿದರು. ಕೈ ಶಾಸಕ ರಾಜೇಗೌಡ ಸುಪ್ರೀಂ ಕದ ಬಡಿದಿರೋದ್ರಿಂದ ಶಾಸಕ ಸ್ಥಾನದ ಉಮೇದುವಾರಿಕೆಗಾಗಿ ಇಂದು ವಿಚಾರಣೆ ನಡೆಯಲಿದೆ. ಇಂದಿನ ವಿಚಾರಣೆಯಲ್ಲಿ ಚುನಾವಣಾ ಆಯೋಗ ಸುಪ್ರೀಂ ಕೋರ್ಟ್ ಆದೇಶದ ಅನ್ವಯ 2023 ಹಾಗೂ 2026ರ ಮತ ಎಣಿಕೆಯ ದಾಖಲೆಗಳನ್ನು ಸುಪ್ರೀಂ ಕೋರ್ಟ್ ಮುಂದೆ ಹಾಜರುಪಡಿಸಿದ್ದು, ನ್ಯಾಯಾಲಯದಲ್ಲಿ ದಾಖಲೆ ಪರಿಶೀಲನೆ ನಡೆಯುವ ಸಾಧ್ಯತೆ ಇದೆ
