ಮಡಿಕೇರಿ : ಮನೆಗೆ ನುಗ್ಗಿ ಚಾಕು ತೋರಿಸಿ ದರೋಡೆ ಮಾಡಿದ ಪ್ರಕರಣ ಸಂಬಂಧ ಆರೋಪಿಯನ್ನು ಬಂಧಿಸುವಲ್ಲಿ ಕೊಡಗು ಜಿಲ್ಲಾ ಪೊಲೀಸರು ಯಶಸ್ವಿಯಾಗಿದ್ದಾರೆ.
ಚೇರಂಬಾಣೆ ನಿವಾಸಿ ಸುದರ್ಶನ್(24) ಬಂಧಿತ ಆರೋಪಿ.
ಆಗಸ್ಟ್ 22ರಂದು ಹಗಲು ವೇಳೆಯಲ್ಲಿ ಚೇರಂಬಾಣೆ ನಿವಾಸಿ ಕೆ.ಕೆ. ಗೋಪಾಲಕೃಷ್ಣ ಎಂಬವರ ಮನೆಯಲ್ಲಿ ಅವರ ತಾಯಿ ಒಪ್ಪರೇ ಇದ್ದ ಸಂದರ್ಭ ನುಗ್ಗಿದ ಆರೋಪಿ, ಚಾಕು ತೋರಿಸಿ ಅವರನ್ನು ಬೆದರಿಸಿದ್ದಾನೆ. ಬಳಿಕ ಕುತ್ತಿಗೆಯಲ್ಲಿದ್ದ ಚಿನ್ನದ ಸರ, ಕಪಾಟಿನಲ್ಲಿದ್ದ ಚಿನ್ನಾಭರಣಗಳನ್ನ ದೋಚಿ ಎಸ್ಕೇಪ್ ಆಗಿದ್ದ. ಈ ಸಂಬಂಧ ಭಾಗಮಂಡಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತಕ್ಷಣ ಕಾರ್ಯಾಚರಣೆ ಕೈಕೊಂಡ ಪೊಲೀಸರು ಸಣ್ಣಪುಲಿಕೋಟು ಬಸ್ ತಂಗುದಾಣ ಬಳಿ ಆರೋಪಿ ಸುದರ್ಶನ್ನನ್ನು ಬಂಧಿಸಿದ್ದಾರೆ.
ಬಂಧಿತನಿಂದ 60 ಗ್ರಾಂ 530 ಮಿಲಿ ಚಿನ್ನಾಭರಣ, 620 ರೂ. ನಗದು, ಕೃತ್ಯಕ್ಕೆ ಬಳಸಿದ ಡ್ರಾಗರ್ ವಶಪಡಿಸಿಕೊಳ್ಳಲಾಗಿದೆ.
ಎಸ್ಪಿ ಕೆ. ರಾಮರಾಜನ್ ಮಾರ್ಗದರ್ಶನದಲ್ಲಿ ಡಿ.ಎಸ್.ಪಿ ಮಹೇಶ್ ಕುಮಾರ್, ಮಡಿಕೇರಿ ಗ್ರಾಮಾಂತರ ವೃತ್ತ ನಿರೀಕ್ಷಕ ಪಿ.ಐ. ಅನೂಪ್ ಮಾದಪ್ಪ, ಭಾಗಮಂಡಲ ಪಿಎಸ್ಐ ಶೋಭಾ ಲಮಾಣಿ ಮತ್ತು ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
