ಬೆಂಗಳೂರು : ಕರ್ನಾಟಕ ಬಿಜೆಪಿಯಲ್ಲಿ ರಾಜ್ಯಾಧ್ಯಕ್ಷರ ವಿರುದ್ಧ ಬಂಡೇಳುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಈಗ ಚಿಕ್ಕಬಳ್ಳಾಪುರ ಸಂಸದ ಡಾ. ಕೆ. ಸುಧಾಕರ್ ಸರದಿ. ಬಹಿರಂಗವಾಗಿಯೇ ವಿಜಯೇಂದ್ರ ವಿರುದ್ಧ ಸಿಡಿದೆದ್ದಿದ್ದಿರುವ ಸುಧಾಕರ್, ಜಿಲ್ಲಾಧ್ಯಕ್ಷ ನೇಮಕದಲ್ಲಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಏಕಪಕ್ಷೀಯ ನಿರ್ಧಾರ ಕೈಗೊಂಡಿದ್ದಾರೆ ಎಂದು ಗುಡುಗಿದ್ದಾರೆ.
ಇಂದು ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಸುಧಾಕರ್, ತಮಗೆ ಬೇಕಾದವರಿಗೆ ಅಧ್ಯಕ್ಷ, ರಾಜ್ಯ ಕಾರ್ಯದರ್ಶಿ, ರಾಜ್ಯ ಪ್ರಧಾನ ಕಾರ್ಯದರ್ಶಿ, ರಾಜ್ಯ ಉಪಾಧ್ಯಕ್ಷ ಸ್ಥಾನ ಕೊಟ್ಟಿದ್ದಾರೆ. ರಾಜ್ಯಾಧ್ಯಕ್ಷ ಮಿಸ್ಟರ್ ಬಿ.ವೈ. ವಿಜಯೇಂದ್ರ ಅವರ ಧೋರಣೆ ಬಹಳ ಬೇಸರ ತಂದಿದೆ. ನಾನು ಬಿಜೆಪಿಯನ್ನು ನಂಬಿ ಇಲ್ಲಿಗೆ ಬಂದೆ. ಆಂತರಿಕ ಪ್ರಜಾಪ್ರಭುತ್ವ, ಆರ್ಎಸ್ಎಸ್ ಆದರ್ಶ ಇದೆ ಎಂದು ಪಕ್ಷದ ತತ್ವ ಸಿದ್ದಾಂತ ಒಪ್ಪಿ ಚಿಕ್ಕಬಳ್ಳಾಪುರದಿಂದ ಸ್ಪರ್ಧೆ ಮಾಡಿದೆ. ಬಿಜೆಪಿಗೆ ಮರಳು ಭೂಮಿಯಂತಿದ್ದ ಚಿಕ್ಕಬಳ್ಳಾಪುರದಲ್ಲಿ ನನ್ನ ರಾಜಕೀಯ ಭವಿಷ್ಯವನ್ನು ಒತ್ತೆ ಇಟ್ಟು ಬಿಜೆಪಿಗೆ ಸೇರಿದ್ದೆ. ಯಡಿಯೂರಪ್ಪನವರನ್ನು ಸಿಎಂ ಮಾಡಬೇಕು ಎಂದು 17 ಜನ ಬಿಜೆಪಿಗೆ ಬಂದೆವು. ಯಡಿಯೂರಪ್ಪನವರು ರಾಜೀನಾಮೆ ಕೊಟ್ಟ ಮೇಲೆ ಬೊಮ್ಮಾಯಿ ಅವರ ಜೊತೆ ಕೂಡಾ ಅಷ್ಟೇ ವಿಶ್ವಾಸದಿಂದ ಕೆಲಸ ಮಾಡಿದ್ದೇನೆ ಎಂದರು.
ನನಗೆ ಅಂತಿಮವಾಗಿ ಬಿಜೆಪಿ ತತ್ವ ಸಿದ್ದಾಂತ ಮುಖ್ಯ. ಪಕ್ಷ ಏನು ಹೇಳಿದೆಯೋ ಅದನ್ನು ಮಾಡಿಕೊಂಡು ಬಂದಿದ್ದೇನೆ. ಒಂದು ಬಾರಿ ನನಗೆ ಚಿಕ್ಕಬಳ್ಳಾಪುರದಲ್ಲಿ ಆಘಾತ ಆಯಿತು. ಇವತ್ತು ಪಕ್ಷ ಕಟ್ಟುತ್ತೇವೆ ಎಂದು ಹೊರಟಿದ್ದವರು ಟಾರ್ಗೆಟ್ ಮಾಡಿ ಸೋಲಿಸುವ ಪ್ರಯತ್ನ ಮಾಡಿದರು. 2019ರಲ್ಲಿ ಸಾಕಷ್ಟು ಅಪಾದನೆಗಳನ್ನೂ ಎದುರಿಸಬೇಕಾಯಿತು. ಇವತ್ತು ಬಿಜೆಪಿಯಲ್ಲಿ ಸಂಘಟನಾ ಚುನಾವಣೆ ನಡೆಯುತ್ತಿದೆ. ವಂಶವಾದ ಇಲ್ಲ. ಪಕ್ಷದಲ್ಲಿ ಪ್ರಜಾಪ್ರಭುತ್ವ ಇದೆ ಎಂದು ನಂಬಿದ್ದೇನೆ. ಎಷ್ಟೇ ಅಪಮಾನ ಆಗಿದ್ದರೂ ನಾವೆಲ್ಲರೂ ಒಂದೇ ಎಂದು ಕೆಲಸ ಮಾಡಿಕೊಂಡು ಬಂದಿದ್ದೇವೆ ಎಂದು ಹೇಳಿದರು.
ಇಂದು ಜಿಲ್ಲಾಧ್ಯಕ್ಷರ ನೇಮಕಾತಿ ಪ್ರಕ್ರಿಯೆ ಪ್ರಾರಂಭ ಆಗಿದೆ. ಯಾವುದೇ ಚುನಾವಣೆ ಸಂವಿಧಾನ ಬದ್ಧವಾಗಿ ಆಗಬೇಕು. ಆಂತರಿಕ ಪ್ರಜಾಪ್ರಭುತ್ವ ಇರಬೇಕು. ಚಿಕ್ಕಬಳ್ಳಾಪುರದಲ್ಲಿ ಯಾವುದೇ ಚುನಾವಣೆ ಮಾಡಲಿಲ್ಲ. ಅನೇಕ ಜಿಲ್ಲೆಗಳಲ್ಲಿ ಇದೇ ರೀತಿ ಆಗಿದೆ ಎಂದು ಆರೋಪಿಸಿದರು.
ನನ್ನ ಸಮಾಧಾನದ ಸಮಯ ಮುಗಿಯಿತು. ಇನ್ನೇನಿದ್ದರೂ ಯುದ್ಧ ಎಂದು ವಿಜಯೇಂದ್ರ ವಿರುದ್ಧ ಸಮರ ಸಾರಿದ್ದಾರೆ. ಸಿ.ಟಿ. ರವಿ, ಬೊಮ್ಮಾಯಿ, ರಮೇಶ್ ಜಾರಕಿಹೊಳಿ ಅವರನ್ನು ಏನು ಮಾಡಿದ್ದೀರಿ ಅನ್ನೋದು ಗೊತ್ತಿದೆ ಬಿಜೆಪಿ ಬಹಳ ಪ್ರಬಲವಾಗಿರುವ ಕಡೆ ನೀವು ರಾಜ್ಯಾಧ್ಯಕ್ಷರಾಗಿ ತಿಣುಕಾಡಿಕೊಂಡು ಗೆದ್ದಿದ್ದೀರಿ. ಅದು ಕೂಡಾ ಅಡ್ಜೆಸ್ಟ್ಮೆಂಟ್ನಲ್ಲಿ. ಇನ್ನೊಬ್ಬರು ಅಭ್ಯರ್ಥಿ ಅಗಿರುತ್ತಿದ್ದರೆ ಗೊತ್ತಾಗಿರುತ್ತಿತ್ತು. ನೀವು ಯಾರನ್ನು ನಂಬಿಕೊಂಡಿದ್ದೀರಿ ಎಂದು ಗೊತ್ತಿದೆ. ಅವರು ನಿಮಗೆ ರಿಯಲ್ ಎಸ್ಟೇಟ್ ನಲ್ಲಿ ಕಾಸು ತಂದುಕೊಡಬಹುದು, ರಾಜಕೀಯ ಮಾಡಲಾಗಲ್ಲ. ಇದೆಲ್ಲವನ್ನ ಕೇಂದ್ರ ನಾಯಕರ ಮುಂದೆ ನಾನು ಹೇಳುತ್ತೇನೆ ಎಂದರು.
ಬಿಜೆಪಿ ಬಣ ಬಡಿದಾಟ ಕಂಟಿನ್ಯೂ.. : ವಿಜಯೇಂದ್ರ ನಾಯಕತ್ವದ ವಿರುದ್ಧ ಸಮರ ಸಾರಿದ ಸಂಸದ ಡಾ. ಸುಧಾಕರ್
RELATED ARTICLES