ಮೂಡಿಗೆರೆ: ಚಾರ್ಮಾಡಿ ಫಾಟಿಯ ನಿಷೇಧಿತ ಪ್ರದೇಶ ಬಿದಿರುತಳದಲ್ಲಿ ಟ್ರೆಕ್ಕಿಂಗ್ಗೆ ತೆರಳಿದ 103 ಮಂದಿ ಪ್ರವಾಸಿಗರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟಿಯ ಬಿದಿರುತಳ ಅರಣ್ಯ ಪ್ರದೇಶಕ್ಕೆ ಟ್ರೆಕ್ಕಿಂಗ್ ನಿಷೇಧ ಇದ್ದು ಆದರೂ ಕಾನೂನುಬಾಹಿರವಾಗಿ ಕಾಡಿಗೆ ಪ್ರವೇಶ ಮಾಡಿ ಟ್ರಕ್ಕಿಂಗ್ ನಡೆಸಲಾಗಿದೆ ಎಂಬ ಖಚಿತ ಮಾಹಿತಿ ಮೇರೆಗೆ ಬಾಳುರು ಮತ್ತು ಬಣಕಲ್ ಪೊಲೀಸರಿಂದ ದಾಳಿ ಮಾಡಲಾಗಿದೆ.
ಬೆಂಗಳೂರು ಮೂಲದ 103 ಜನ ಪ್ರವಾಸಿಗರು ಅಲ್ಲಿಗೆ ತೆರಳಿದ್ದರು. ಸ್ಥಳೀಯರು ಅವರನ್ನು ಅಲ್ಲಿಗೆ ಕರೆದುಕೊಂಡು ಹೋಗಿದ್ದರು. ಅವರನ್ನೆಲ್ಲ ಬಾಳೂರು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಎರಡು ಬಸ್, ಮೂರು ಪಿಕಪ್ ವಾಹನಗಳನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬೆಂಗಳೂರಿನ ಪ್ರತಿಷ್ಠಿತ ಕಂಪನಿಯ ಉದ್ಯೋಗಿಗಳು ಟೂರಿಸ್ಟ್ ಪ್ಯಾಕೇಜ್ ಅಡಿಯಲ್ಲಿ ಪ್ರವಾಸಕ್ಕೆ ತೆರಳಿದ್ದರು. ಬಿದಿರುತಳ ಗ್ರಾಮ, ಚಿಕ್ಕಮಗಳೂರು ಜಿಲ್ಲೆಯ ಕೊನೆಯ ಗ್ರಾಮವಾಗಿದೆ.
ಅರಣ್ಯ ಇಲಾಖೆಯ ಪ್ರಕಾರ ಅನುಮತಿ ಇಲ್ಲದೆ ಕಾಡಿನೊಳಗೆ ಪ್ರವೇಶ ಮಾಡುವುದು ಅರಣ್ಯಾ ಕಾಯ್ದೆಯ ಪ್ರಕಾರ ಗಂಭಿರ ಅಪರಾಧವಾಗಿದ್ದು ಈ ಹಿನ್ನೆಲೆ ಬಂಧಿತರಿಗೆ ಕಾನೂನಾತ್ಮಕವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
