ಹಾಸನ: ಬೇಲೂರಿನ ಲಿಂಗಾಪುರದಲ್ಲಿ ದೈತ್ಯಾಕಾರದ ಕಾಡಾನೆಯೊಂದು ಸೈಲೆಂಟಾಗಿ ಮನೆಯೊಂದರ ಬಳಿ ಬಂದು ನಿಂತು ಮನೆ ಮಂದಿಗೆ ಆತಂಕ ಉಂಟು ಮಾಡಿದೆ. ಅಲ್ಲದೇ ಕೂದಲೆಳೆ ಅಂತರದಲ್ಲಿ ದಾಳಿಯಿಂದ ಮನೆ ಮಂದಿ ಬಚಾವ್ ಆಗಿದ್ದಾರೆ.
ಬೆಳಿಗ್ಗೆ ಕಾಡಾನೆಗಳು ಮನೆಯ ಮುಂಭಾಗದಿಂದ ದಾಟಿ ಹೋಗಿದ್ದವು. ಇದರಿಂದ ಗಾಬರಿಗೊಂಡಿದ್ದ ಮನೆಯ ಮಾಲೀಕರು ಮಹಡಿ ಮೇಲೆ ನಿಂತು ನೋಡಿದಾಗ ಒಂಟಿಕೋರೆ ಕಾಡಾನೆ ಕಾಣಿಸಿಕೊಂಡಿದೆ. ಮನೆಯವರು ಸದ್ದು ಮಾಡುತ್ತಿದ್ದಂತೆ ಕಾಫಿ ತೋಟದ ಒಳಗೆ ಸೈಲೆಂಟ್ ಆಗಿ ಅಡಗಿದ್ದ ಕಾಡಾನೆ ಹೊರ ಬಂದಿದ್ದು ವಿಡಿಯೋ ಮಾಡುತ್ತಿದ್ದವರ ಮೇಲೆ ದಾಳಿಗೆ ಯತ್ನಿಸಿದೆ.
ನಂತರ ರಸ್ತೆ ದಾಟಿ ಕಾಫಿ ತೋಟದೊಳಗೆ ಕಾಡಾನೆ ಹೋಗಿದ್ದು, ಕಾಡಾನೆ ಬರುವುದರ ಅರಿವಿಲ್ಲದೆ ವಾಹನ ಸವಾರರ ಸಂಚಾರ ಮಾಡಿದ್ದಾರೆ. ಈ ವೇಳೆ ಕಾರಲ್ಲಿದ್ದವರು ಸಹ ಕ್ಷಣಾರ್ಧದಲ್ಲಿ ಪಾರಾಗಿದ್ದಾರೆ.
ಅರೇಹಳ್ಳಿ ವ್ಯಾಪ್ತಿಯಲ್ಲಿ ಕಾಡಾನೆಗಳ ಉಪಟಳ ಮತ್ತೆ ಹೆಚ್ಚಾಗಿದ್ದು, ಸ್ಥಳೀಯರಲ್ಲಿ ಆತಂಕ ಮನೆ ಮಾಡಿದೆ. ಅರಣ್ಯ ಇಲಾಖೆ ಈ ಬಗ್ಗೆ ಗಮನಹರಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
