ಆಲೂರು : ಪಟ್ಟಣದ ಸರ್ಕಾರಿ ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯದಿಂದ ಪ್ರಕೃತಿ ನಗರ ನಿವಾಸಿ ನವೀದ್ ಅಹಮದ್ ಶರೀಫ್ (48) ಎಂಬಾತ ಮೃತಪಟ್ಟ ಘಟನೆ ಪಟ್ಟಣದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.
ಮಂಗಳವಾರ ತಡರಾತ್ರಿ ಎದೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕುಟುಂಬದವರೊಂದಿಗೆ ಆಸ್ಪತ್ರೆ ಸೇರಿದ ನವೀದ್ ಅವರು ಗೇಟ್ ಬೀಗ ಹಾಕಲ್ಪಟ್ಟಿದ್ದರಿಂದ ಒಳನುಗ್ಗಲು ಸಾಧ್ಯವಾಗದೆ, ಚಿಕಿತ್ಸೆ ಸಿಗದೆ ಮನೆಗೆ ಮರಳುವ ವೇಳೆ ಪ್ರಾಣ ಬಿಟ್ಟಿದ್ದಾರೆ.

ಘಟನೆಯ ನಂತರ ಬುಧವಾರ ಬೆಳಗ್ಗೆ ಪಟ್ಟಣದ ಸರ್ಕಾರಿ ಆಸ್ಪತ್ರೆಯ ಮುಂದೆ ಸಾರ್ವಜನಿಕರು, ವಿವಿಧ ಸಂಘಟನೆಗಳ ಕಾರ್ಯಕರ್ತರು ಹಾಗೂ ಪಕ್ಷದ ಮುಖಂಡರು ಸೇರಿ ಭಾರೀ ಪ್ರತಿಭಟನೆ ನಡೆಸಿದರು.ವೈದ್ಯರನ್ನು ಕರ್ತವ್ಯದಿಂದ ವಜಾಗೊಳಿಸುವಂತೆ ಆಗ್ರಹಿಸಿದರು.
ಪ್ರತಿಭಟನಾಕಾರರು ತಾಲೂಕು ಆಸ್ಪತ್ರೆಯಲ್ಲಿ ತಜ್ಞ ವೈದ್ಯರ ಕೊರತೆ, ತುರ್ತು ಸೇವೆಗಳ ಲೋಪ ಹಾಗೂ ನಿರ್ಲಕ್ಷ್ಯ ಕುರಿತು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. “ಇಲ್ಲಿ ಚಿಕಿತ್ಸೆ ಸಿಗದೆ ಹಾಸನಕ್ಕೆ ಕಳುಹಿಸುವುದೇ ರೂಢಿಯಾಗಿದೆ, ಈ ಸ್ಥಿತಿಗೆ ಅಧಿಕಾರಿಗಳೇ ಕಾರಣ” ಎಂದು ಆರೋಪಿಸಿದರು.
ಶಾಸಕ ಸಿಮೆಂಟ್ ಮಂಜು, ಮಸೀದಿಗೆ ತೆರಳಿ ಬೇಟಿ ನೀಡಿ ಮೃತರ ಅಂತಿಮ ದರ್ಶನ ಮಾಡಿದರು, ನಂತರ ನಿವಾಸಕ್ಕೆ ತೆರಳಿ ಕುಟುಂಬಕ್ಕೆ ಸಾಂತ್ವನ ಹೇಳಿದರು. ಇದೆ ವೇಳೆ ಮೃತರ ಪುತ್ರಿಯ ಮಾತು ಕೇಳಿ ಕೆಲ ಕ್ಷಣ ಶಾಸಕರ ಕಣ್ಣಿನಲ್ಲಿ ನೀರು ತುಂಬಿಕೊಂಡಿತ್ತು.
ಪ್ರಕರಣದ ತನಿಕೆ ನಡೆಸಿ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ಘಟನೆಯ ಬಗ್ಗೆ ಮಾಹಿತಿ ಪಡೆದ ಡಿ.ಎಚ್.ಓ ಡಾ. ಅನಿಲ್, ಡಾ. ಕಿಶೋರ್ ಕುಮಾರ್, ಮತ್ತು ಡಾ. ನಿಸಾರ್ ಫಾತಿಮಾ ಸ್ಥಳಕ್ಕೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದರು. ಡಾ. ಅನಿಲ್ ಅವರು, “ಕರ್ತವ್ಯ ಲೋಪ ತೋರಿದ ಸಿಬ್ಬಂದಿಗಳ ವಿರುದ್ಧ ತನಿಖೆ ನಡೆಸಿ ಕ್ರಮ ಕೈಗೊಳ್ಳಲಾಗುವುದು,” ಎಂದು ತಿಳಿಸಿದರು. ಪೋಲಿ ವೃತ್ತ ನಿರೀಕ್ಷಕ ಮೋಹನ್ ರೆಡ್ಡಿ ನೇತೃತ್ವದಲ್ಲಿ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು.
