ಚಿಕ್ಕಮಗಳೂರು: ಕಾಫಿ ಸಂಸ್ಕೃತಿಯನ್ನು ಉಳಿಸಿಕೊಳ್ಳಬೇಕು. ಇಲ್ಲವಾದಲ್ಲಿ ಮುಂದೆ ಉದ್ಯಮಕ್ಕೆ ಬಹಳ ಅಪಾಯ ಕಾದಿದೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಎಚ್ಚರಿಸಿದರು.

ನಗರದ ಆಜಾದ್ ಪಾರ್ಕ್ನಲ್ಲಿ ಚಿಕ್ಕಮಗಳೂರು ಜಿಲ್ಲಾ ಬೆಳೆಗಾರರ ಸಂಘದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಅಂತರರಾಷ್ಟ್ರೀಯ ಕಾಫಿ ದಿನಾಚರಣೆ ಕಾರ್ಯಕ್ರಮದ ಜಾಥ ಉದ್ಘಾಟಿಸಿ ಮಾತನಾಡಿ ಈಗ ಹಣ ಇದ್ದವರೆಲ್ಲ ಬಂದು ತೋಟ ಖರೀದಿಸುತ್ತಿದ್ದಾರೆ. ಆರಂಭದಲ್ಲಿ ವಾರಕ್ಕೊಮ್ಮೆ ತೋಟಕ್ಕೆ ಬರುವ ಅವರು ನಂತರ ೬ ತಿಂಗಳು, ವರ್ಷಕ್ಕೊಮ್ಮೆ ಬರಲಾರಂಭಿಸಿ ಕ್ರಮೇಣ ತೋಟವನ್ನು ಹಾಳು ಬಿಡುತ್ತಾರೆ. ಹಾಗಾಗಿ ಒಳ್ಳೊಳ್ಳೆ ತೋಟಗಳು ಹಾಳುಬಿದ್ದಿವೆ. ಎಲ್ಲಾದರೂ ತೋಟ ಹಾಳು ಬಿದ್ದಿದ್ದರೆ ಇದಾರೋ ಕಾಫಿ ಕುಟುಂಬಕ್ಕೆ ಸೇರಿದವರದ್ದಲ್ಲ ಎನ್ನುವುದು ಗೊತ್ತಾಗುತ್ತದೆ ಎಂದು ತಿಳಿಸಿದರು.

ಹೀಗಾಗಿ ಕಾರ್ಮಿಕರು, ಮಾಲೀಕರ ನಡುವೆ ಭೇದ ಭಾವವಿಲ್ಲದೆ ನಾವೆಲ್ಲರೂ ಒಂದು ಕುಟುಂಬದವರು ಎಂದು ಭಾವಿಸಿ ಕಾಫಿ ಸಂಸ್ಕೃತಿಯನ್ನು ಉಳಿಸಬೇಕಿದೆ. ಎಲ್ಲರ ಕಷ್ಟ ಸುಖಗಳೊಂದಿಗೆ ಭಾಗಿಗಳಾದಾಗ ಪಾರಿವಾರಿಕ ಸಂಬಂಧ ಉಳಿಸಿಕೊಳ್ಳಲು ಸಾಧ್ಯವಿದೆ ಎಂದು ತಿಳಿಸಿದರು.
ಕಾಫಿ ಸಂಸ್ಕೃತಿ ಉಳಿಯಬೇಕೆಂದರೆ ತೋಟ ಎಷ್ಟು ಮಾಡುತ್ತೇವೋ ಅಷ್ಟು ಮನೆ ತುಂಬ ಮಕ್ಕಳನ್ನೂ ಮಾಡಿಕೊಳ್ಳಬೇಕು. ಮಕ್ಕಳಿಗೆ ಕಾಫಿ ಕೃಷಿಯ ಬಗ್ಗೆ ಹೇಳಿಕೊಡಬೇಕು. ಇದನ್ನು ಯಾವ ರೀತಿ ಬೇಕಾದರೂ ತೆಗೆದುಕೊಳ್ಳಬಹುದು. ಇಲ್ಲವಾದಲ್ಲಿ ಬರೇ ಕಾಫಿ ಅಷ್ಟೇ ಅಲ್ಲ ದೇಶವೇ ಉಳಿಯುವುದಿಲ್ಲ ಎಂದರು.
ಕಾಫಿ ಬೆಲೆ ಹೆಚ್ಚಿದ್ದರೂ ನಿರ್ವಹಣಾ ವೆಚ್ಚ ದುಪ್ಪಟ್ಟಾಗಿದೆ. ಜೊತೆಗೆ ಕಾರ್ಮಿಕರ ಕೊರತೆಯೂ ಇದೆ. ಕಾಲ ಕೆಟ್ಟಾಗಲೂ, ಒಳ್ಳೆಯದಾದಾಗಲೂ ಸಮಚಿತ್ತದಿಂದ ಸ್ವೀಕಾರ ಮಾಡಬೇಕು. ಕರ್ನಾಟಕದ ಕಾಫಿಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ವಿಶೇಷವಾದ ಬೆಲೆ ಇದೆ. ನೆರಳಿನಲ್ಲಿ, ನೈಸರ್ಗಿಕವಾಗಿ ಬೆಳೆಯುವ ಕಾಪಿ ನಮ್ಮದು. ಅದನ್ನು ಒಂದು ಬ್ರಾಂಡ್ ಆಗಿ ಮಾಡಬೇಕಿದೆ. ಪ್ರತಿ ತೋಟವೂ ಬ್ರಾಂಡ್ ಆಗುವಂತಾಗಬೇಕು ಎಂದರು.
ಒಂದು ವಾರ ಕಾಫಿ ಮೇಳವನ್ನು ಮಾಡಿ ಅದು ಬೆಳೆದು ಬಂದ ದಾರಿ ಬಗ್ಗೆ ಹೊರಗಿನವರಿಗೆ ಪರಿಚಯಿಸುವುದರಿಂದ ಪ್ರವಾಸೋದ್ಯಮಕ್ಕೂ ಒತ್ತು ನೀಡಿದಂತಾಗುತ್ತದೆ. ಕಾಫಿಗೆ ಮೌಲ್ಯ ವರ್ಧನೆ ಮಾಡಬೇಕು. ಅದಕ್ಕಾಗಿ ಬೇರೆ ಬೇರೆ ಪ್ರಯೋಗ ಮಾಡಿ ಕಾಫಿಗೆ ಜಾಗತಿಕ ಮಟ್ಟದಲ್ಲಿ ಒಂದು ವೇದಿಕೆ ಕಲ್ಪಿಸುವ ಕೆಲಸ ಮಾಡಬೇಕು. ಆರಂಭಿಕವಾಗಿ ಸರ್ಕಾರದ ನೆರವು ಇದಕ್ಕೆ ಬೇಕಾಗುತ್ತದೆ ಎಂದರು.
ಶಾಸಕ ಎಚ್.ಡಿ.ತಮ್ಮಯ್ಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಕಾಫಿ ಬೆಲೆ ಏರು ಪೇರಾದರೂ ಗೊಬ್ಬರ, ಕಾರ್ಮಿಕರ ವೇತನ ಇನ್ನಿತರೆ ನಿರ್ವಹಣಾ ವೆಚ್ಚ ಏರು ಪೇರು ಆಗುವುದಿಲ್ಲ. ಸಧ್ಯಕ್ಕೆ ಕಾಫಿ ಬೆಲೆ ಉತ್ತಮವಾಗಿದ್ದರೂ ಅದು ಹೀಗೇ ಇರುತ್ತದೆ ಎಂದು ಹೇಳಲಾಗುವುದಿಲ್ಲ ಎಂದರು
ಅರಣ್ಯ ಮತ್ತು ಕಂದಾಯ ಇಲಾಖೆಗಳಿಂದ ಜಂಟೀ ಸರ್ವೇ ಕಾರ್ಯ ನಡೆಯುವವರೆಗೆ ಕಾಫಿ ಒತ್ತುವರಿ ಸಮಸ್ಯೆ ಬಗೆಹರಿಸಲು ಆಗುವುದಿಲ್ಲ. ಡೀಮ್ಡ್ ಫಾರೆಸ್ಟ್ ಸಮ್ಯೆ ಬಗೆಹರಿಸುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ ಎಂದು ಭರವಸೆ ನೀಡಿದರು.
ಕರ್ನಾಟಕ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಹಳಸೆ ಶಿವಣ್ಣ ಮಾತನಾಡಿ, ೧೯೨೫ ರಲ್ಲಿ ಅಂರತರಾಷ್ಟ್ರೀಯ ಕಾಫಿ ಸಂಶೋಧನಾ ಕೇಂದ್ರ ಆರಂಭವಾಗಿದ್ದು ಇದೀಗ ೧೦೦ ವರ್ಷ ತುಂಬುತ್ತಿದೆ. ಅದರ ಸಂಭ್ರವನ್ನು ನ.೬ ರಿಂದ ೯ ರ ವರೆಗೆ ನಡೆಸಲಾಗುವುದು ಎಂದರು.
ಪ್ರತಿ ವರ್ಷ ದೇಶದ ಬೊಕ್ಕಸಕ್ಕೆ ಸುಮಾರು ೧೫ ಸಾವಿರ ಕೋಟಿ ರೂ. ಆದಾಯ ಸಂದಾಯವಾಗುತ್ತಿದೆ. ವರ್ಷ ಪೂರ್ತಿ ಕಾರ್ಮಿಕರಿಗೆ ಉದ್ಯೋಗ ಕಲ್ಪಿಸುತ್ತಿದೆ. ಕಾಫಿ ಕೃಷಿಯಲ್ಲಿ ಹೊಸ ತಳಿಗಳ ಪರಿಚಯ ಮತ್ತು ಯಾಂತ್ರೀಕರಣ ಅಗತ್ಯವಾಗಿ ಆಗಬೇಕಿದೆ. ಕಾಫಿ ಉದ್ಯಮ ಎದುರಿಸುತ್ತಿರುವ ಸಮಸ್ಯೆಗಳ ನಡುವೆ ಯುವ ಜನತೆ ಉದ್ಯಮಕ್ಕೆ ಬರದಿದ್ದಲ್ಲಿ ತೊಂದರೆ ಆಗುತ್ತಿದೆ. ಕಾಫಿ ಸಂಬಂಧ ಕಠಿಣ ಕಾನೂನುಗಳು ಬರುತ್ತಿವೆ ಇದರ ಬಗ್ಗೆ ಎಚ್ಚರವಾಗಿರಬೇಕು ಎಂದರು.
ಚಿತ್ರ ನಟಿ ಶಮಿತಾ ಗೌಡ ಮಾತನಾಡಿದರು. ಕೆರೆಮಕ್ಕಿ ಮಹೇಶ್ ಸ್ವಾಗತಿಸಿ ಚಿಕ್ಕಮಗಳೂರು ಜಿಲ್ಲಾ ಬೆಳೆಗಾರರ ಸಂಘದ ಅದ್ಯಕ್ಷ ಕೆ.ಯು.ರತೀಶ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ನಾಗರೀಕ ಮತ್ತು ರೈತ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಎಸ್.ವಿಜಯಕುಮಾರ್, ಮಕ್ಕಳ ತಜ್ಞ ಡಾ.ಜೆ.ಪಿ ಕೃಷ್ಣೇಗೌಡ, ಡಾ.ಡಿ.ಎಲ್.ವಿಜಯಕುಮಾರ್, ಮಹಿಳಾ ಒಕ್ಕೂಟದ ಅಧ್ಯಕ್ಷೆ ಪವಿತ್ರಾ ಹಳೇಕೋಟೆ, ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಟಿ.ರಾಜಶೇಖರ್, ಕಾಫಿ ಬೆಳೆಗಾರರಾದ ಹೆಚ್.ಎಚ್.ದೇವರಾಜ್, ಬಾಲಕೃಷ್ಣ, ಬಿ.ಎಸ್ ಜಯರಾಮ್. ಸುರೇಶ್, ಅಶೋಕ್, ಮನುಕುಮಾರ್, ಟಿ.ಡಿ ಮಲ್ಲೇಶ್, ದೀಪಕ್ ದೊಡ್ಡಯ್ಯ ಇತರರು ವೇದಿಕೆಯಲ್ಲಿದ್ದರು.
