ಚಿಕ್ಕಮಗಳೂರು: ದ್ವಿಚಕ್ರ ವಾಹನ ಚಾಲಕರಿಗೆ ಪೊಲೀಸ್ ಸಿಬ್ಬಂದಿಗಳು ಗುಲಾಬಿ ಹೂವುಗಳನ್ನು ನೀಡಿ ಜೀವರಕ್ಷಕ ಹೆಲ್ಮೆಟ್ ಹಾಗೂ ಸಂಚಾರಿ ನಿಯಮಗಳನ್ನು ಪಾಲಿಸುವಂತೆ ವಿನೂತನ ಜಾಗೃತಿ ಕಾರ್ಯಕ್ರಮ ವನ್ನು ಪೊಲೀಸ್ ಇಲಾಖೆಯಿಂದ ಶುಕ್ರವಾರ ನಡೆಸಲಾಯಿತು.
ಬೀರೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪೊಲೀಸ್ ವೃತ್ತ ನಿರೀಕ್ಷಕರಾದ ಶ್ರೀಕಾಂತ್, ಉಪನಿರೀಕ್ಷಕರಾದ ತಿಪ್ಪೇಶ್ ಹಾಗೂ ಬೀರೂರು ಪೊಲೀಸ್ ಠಾಣೆಯ ಸಿಬ್ಬಂದಿಗಳು ವಿನೂತನ ಅಭಿಯಾನವನ್ನು ನಡೆಸಿದರು.
ಹೆಲ್ಮೆಟ್ ಧರಿಸದೆ ದ್ವಿಚಕ್ರ ವಾಹನ ಚಾಲನೆ ಮಾಡುತ್ತಿದ್ದ ವಾಹನ ಸವಾರರಿಗೆ ಗುಲಾಬಿ ಹೂವುಗಳನ್ನು ನೀಡಿ ತಲೆಗೆ ಹೆಲ್ಮೆಟ್ ಧರಿಸದಿದ್ದರೆ ಆಗುವ ಅನಾಹುತ, ಜೀವದ ಮಹತ್ವ, ಕುಟುಂಬ ಸದಸ್ಯರ ಪರಿಸ್ಥಿತಿ ವಿವರಿಸಿ ಆತ್ಮರಕ್ಷಣೆಯ ಸುರಕ್ಷತಾ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸುವ ಜತೆಗೆ ಉತ್ತಮ ಗುಣಮಟ್ಟದ ಹೆಲ್ಮೆಟ್ಗಳನ್ನು ಧರಿಸುವಂತೆ ಜಾಗೃತಿ ಮೂಡಿಸಿದರು.
ಜತೆಗೆ ಅತಿವೇಗ ಅಜಾಗುರೂಕತೆಯಿಂದ ವಾಹನ ಚಾಲನೆ ಮಾಡದಂತೆ, ಅಪ್ರಾಪ್ತರಿಗೆ ವಾಹನ ನೀಡದಂತೆ, ಸೀಟ್ ಬೆಲ್ಟ್ ಧರಿಸುವಂತೆ ರಸ್ತೆ ಸಂಚಾರ ನೀತಿ ನಿಯಮಗಳನ್ನು ಪಾಲಿಸುವಂತೆ ವಾಹನ ಸವಾರರಿಗೆ ತಿಳು ವಳಿಕೆ ನೀಡಿದರು.
