ಚಿಕ್ಕಮಗಳೂರು: ದುಬೈನಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಕರ್ನಾಟಕದ ಎಸ್.ಎಲ್.ಭೋಜೇಗೌಡ ಅವರು ಈಗ ಸುರಕ್ಷಿತವಾಗಿದ್ದಾರೆ. ತಾವು ಸುರಕ್ಷಿತವಾಗಿರುವ ಬಗ್ಗೆ ಸ್ವತಃ ಭೋಜೇಗೌಡ ಅವರೇ ವಿಡಿಯೋ ಮಾಡಿ ಕಳುಹಿಸಿದ್ದಾರೆ.

ವಿಮಾನ ನಿಲ್ದಾಣದ ಉಂಟಾದ ಅವ್ಯವಸ್ಥೆಯಿಂದಾಗಿ ಹೋಟೆಲ್ನಲ್ಲಿ ತಂಗಿ ಅತಂತ್ರಕ್ಕೀಡಾಗಿದ್ದ ಅವರನ್ನು ಖ್ಯಾತ ಅನಿವಾಸಿ ಭಾರತೀಯ ಉದ್ಯಮಿ ರೊನಾಲ್ಡ್ ಕುಲಾಸೋ ಅವರು ತಮ್ಮ ನಿವಾಸಕ್ಕೆ ಕರೆದೊಯ್ದು ಆಶ್ರಯ ನೀಡಿದ್ದಾರೆ. ಪ್ರಸ್ತುತ ಭೋಜೇಗೌಡರು ತಮ್ಮ ಕುಟುಂಬದೊಂದಿಗೆ ಕುಲಾಸೋ ಅವರ ಮನೆಯಲ್ಲಿ ಆರಾಮವಾಗಿದ್ದು, ಅಭಿಮಾನಿಗಳು ಆತಂಕಪಡುವ ಅಗತ್ಯವಿಲ್ಲ ಎಂದು ಸ್ವತಃ ಭೋಜೆಗೌಡರೇ ಸ್ಪಷ್ಟಪಡಿಸಿದ್ದಾರೆ.

ದುಬೈನ ಪ್ರಸ್ತುತ ಸ್ಥಿತಿಯ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಅವರು, ಅಲ್ಲಿನ ಪರಿಸ್ಥಿತಿ ಇನ್ನು ಪೂರ್ಣವಾಗಿ ಸುಧಾರಿಸಿಲ್ಲ. ಅಲ್ಲಲ್ಲಿ ಸ್ಫೋಟದಂತಹ ಭೀಕರ ಶಬ್ದಗಳು ಕೇಳಿಬರುತ್ತಿದ್ದು, ಜನರಲ್ಲಿ ಆತಂಕ ಮನೆಮಾಡಿದೆ. ವಿಷಯ ತಿಳಿಯುತ್ತಿದ್ದಂತೆಯೇ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹ ಸಚಿವ ಪರಮೇಶ್ವರ್ ಮತ್ತು ಜಗದೀಶ್ ಶೆಟ್ಟರ್ ಅವರು ಭೋಜೆಗೌಡರಿಗೆ ಕರೆ ಮಾಡಿ, ಆರೋಗ್ಯ ವಿಚಾರಿಸಿರುವುದಾಗಿ ತಿಳಿಸಿದ್ದಾರೆ.
