ಚಿಕ್ಕಮಗಳೂರು: ಜಿಲ್ಲೆಯ ತರೀಕೆರೆ ತಾಲ್ಲೂಕಿನ ಬಾವಿಕೆರೆ ಗ್ರಾಮದಲ್ಲಿ ನಡೆದಿದ್ದ ಭೀಕರ ಕೊಲೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ, ಅತ್ತಿಗೆಯನ್ನೇ ಹತ್ಯೆಗೈದ ಆರೋಪಿಗೆ ನ್ಯಾಯಾಲಯವು ಮಹತ್ವದ ಶಿಕ್ಷೆ ಪ್ರಕಟಿಸಿದೆ.
ಹಣದ ವಿಚಾರವಾಗಿ ಉಂಟಾದ ಭಿನ್ನಾಭಿಪ್ರಾಯದ ಹಿನ್ನೆಲೆಯಲ್ಲಿ ಈ ಕೊಲೆ ನಡೆದಿದ್ದು, ಅಪರಾಧಿ ಕುಮಾರನಾಯ್ಕನಿಗೆ 2ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು 7 ವರ್ಷಗಳ ಕಠಿಣ ಜೈಲು ಶಿಕ್ಷೆ ಹಾಗೂ 50 ಸಾವಿರ ರೂಪಾಯಿ ದಂಡ ವಿಧಿಸಿ ತೀರ್ಪು ನೀಡಿದೆ. ದಂಡ ಪಾವತಿಸಲು ತಪ್ಪಿದಲ್ಲಿ ಆರೋಪಿ ಹೆಚ್ಚುವರಿಯಾಗಿ ಮತ್ತೊಂದು 6 ತಿಂಗಳ ಕಠಿಣ ಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ ಎಂದು ನ್ಯಾಯಾಧೀಶರಾದ ಪ್ರವೀಣ್ ಕುಮಾರ್ ಅವರು ತಮ್ಮ ತೀರ್ಪಿನಲ್ಲಿ ಸ್ಪಷ್ಟಪಡಿಸಿದ್ದಾರೆ.
ಈ ಪ್ರಕರಣದ ಹಿನ್ನೆಲೆಯನ್ನು ನೋಡುವುದಾದರೆ, ಲಕ್ಕವಳ್ಳಿ ಹೋಬಳಿಯ ಬಾವಿಕೆರೆ ನಿವಾಸಿ ಸುಮಿತ್ರಾ ಬಾಯಿ ಎಂಬಾಕೆಯ ಪತಿ ರಾಮನಾಯ್ಕ ಅನಾರೋಗ್ಯದಿಂದ ಮೃತಪಟ್ಟಿದ್ದರು. ಆ ಬಳಿಕ 2019 ರಲ್ಲಿ ರಾಮನಾಯ್ಕ ಅವರ ತಮ್ಮ ಕುಮಾರನಾಯ್ಕ ಅತ್ತಿಗೆಯ ಜೊತೆ ಅಕ್ರಮ ಸಂಬಂಧ ಹೊಂದಿದ್ದ ಎನ್ನಲಾಗಿದೆ. ಈ ಸಂಬಂಧದಿಂದ ಮಕ್ಕಳ ಮೇಲೆ ಕೆಟ್ಟ ಪರಿಣಾಮ ಬೀರಬಾರದೆಂದು ಸುಮಿತ್ರಾ ಬಾಯಿ ತನ್ನ ಮಕ್ಕಳನ್ನು ಹೊಗರೆಹಳ್ಳಿಯ ತಾಯಿ ಮನೆಯಲ್ಲಿ ಬಿಟ್ಟಿದ್ದರು.
೨೦೧೯ ರ ಅಕ್ಟೋಬರ್ 7 ರಂದು ರಾತ್ರಿ ಇಬ್ಬರ ನಡುವೆ ಹಣದ ವಿಚಾರವಾಗಿ ತೀವ್ರ ಜಗಳ ನಡೆದಿದೆ. ಸುಮಿತ್ರಾ ಅಟ್ಟದ ಮೇಲೆ ಹಣ ಇಟ್ಟಿರುವುದಾಗಿ ಹೇಳಿ ಕುಮಾರನಾಯ್ಕ ಆಕೆಯನ್ನು ಹಿಂಬಾಲಿಸಿದ್ದಾನೆ. ಈ ವೇಳೆ ಇಬ್ಬರ ನಡುವೆ ಉಂಟಾದ ವಾಗ್ವಾದ ವಿಕೋಪಕ್ಕೆ ತಿರುಗಿ, ಆರೋಪಿ ಕುಮಾರನಾಯ್ಕ ಸುಮಿತ್ರಾಗೆ ಬಲವಾಗಿ ಕಪಾಳಮೋಕ್ಷ ಮಾಡಿದ್ದಾನೆ. ಬಳಿಕ ಕೆಳಗೆ ಬಿದ್ದ ಆಕೆಯ ಕುತ್ತಿಗೆಗೆ ತಾನು ಧರಿಸಿದ್ದ ಪಂಚೆಯನ್ನು ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ.
ಲಕ್ಕವಳ್ಳಿ ಪೊಲೀಸ್ ಠಾಣೆಯ ಪಿಐ ಹೆಚ್.ಎಸ್.ಜಗದೀಶ್ ಹಾಗೂ ತರೀಕೆರೆ ಠಾಣೆಯ ಸಿಪಿಐ ಕೆ.ಎಂ.ಯೋಗೇಶ್ ಅವರು ಪ್ರಕರಣದ ಸಮಗ್ರ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ತನಿಖಾ ಸಹಾಯಕರಾಗಿ ಹೆಚ್ಸಿ ಪ್ರದೀಪ್ ಕುಮಾರ್ ಹಾಗೂ ಸಾಕ್ಷಿದಾರರನ್ನು ಹಾಜರುಪಡಿಸುವಲ್ಲಿ ನ್ಯಾಯಾಲಯದ ಸಿಬ್ಬಂದಿ ಕೆ.ಆರ್.ಶಿವಕುಮಾರ್ ಪ್ರಮುಖ ಪಾತ್ರ ವಹಿಸಿದ್ದರು.
ಸುದೀರ್ಘ ವಿಚಾರಣೆ ನಡೆಸಿದ ನ್ಯಾಯಾಲಯವು ಐಪಿಸಿ ಕಲಂ 304(1) ರಡಿ ಆರೋಪಿಯು ಸಂಶಯಾತೀತವಾಗಿ ಅಪರಾಧ ಎಸಗಿರುವುದು ಸಾಬೀತಾಗಿದೆ ಎಂದು ತೀರ್ಮಾನಿಸಿ ಈ ಕಠಿಣ ಶಿಕ್ಷೆಯನ್ನು ಪ್ರಕಟಿಸಿದೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕಿ ಭಾವನ ಅವರು ನ್ಯಾಯಾಲಯದಲ್ಲಿ ಸಮರ್ಥವಾಗಿ ವಾದ ಮಂಡಿಸಿದ್ದರು.
