ಹಾಸನ: ತಿಂಡಿ ಖರೀದಿಸಿ ಹಣ ನೀಡದೆ ಹೋಗುತ್ತಿದ್ದನ್ನು ಪ್ರಶ್ನೆ ಮಾಡಿದ ಹಿನ್ನೆಲೆ ಬೇಕರಿಯಲ್ಲಿ ಗಲಾಟೆ ನಡೆದು, ಮೂವರು ಯುವಕರು ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಹಾಸನ ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ಹೊಳೆನರಸೀಪುರ ಪಟ್ಟಣದ ಹಳ್ಳಿ ಮೈಸೂರು ಕ್ರಾಸ್ ಬಳಿ ಇರುವ ರಾಷ್ಟ್ರೀಯ ಹೆದ್ದಾರಿ 373 ಸಮೀಪದ ಬೇಕರಿಯಲ್ಲಿ ಈ ಘಟನೆ ಸಂಭವಿಸಿದೆ. ಮಧ್ಯಾಹ್ನ ವೇಳೆ ಮದ್ಯದ ಅಮಲಿನಲ್ಲಿ ಬಂದಿದ್ದ ಯುವಕರ ಗುಂಪು ತಿಂಡಿ ಖರೀದಿಸಿ ಹಣ ನೀಡದೆ ತೆರಳಲು ಯತ್ನಿಸಿದೆ. ಇದನ್ನು ಬೇಕರಿ ಮಾಲೀಕ ಹಾಗೂ ಅಲ್ಲಿದ್ದ ಮತ್ತೊಬ್ಬ ವ್ಯಕ್ತಿ ಪ್ರಶ್ನಿಸಿದಾಗ ಗಲಾಟೆ ಶುರುವಾಗಿದೆ.

ಈ ವೇಳೆ ಮೂವರು ಆರೋಪಿಗಳು ಬೇಕರಿ ಮಾಲೀಕರ ಮೇಲೆ ಹಲ್ಲೆ ನಡೆಸಿದ್ದು, ಗಲಾಟೆ ತಡೆಯಲು ಮುಂದಾದ ಸುಹೇಲ್ ಎಂಬುವರ ಮೇಲೂ ಮಾರಣಾಂತಿಕವಾಗಿ ದಾಳಿ ನಡೆಸಿದ್ದಾರೆ. ಘಟನೆಯಲ್ಲಿ ಸುಹೇಲ್ ಅವರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಆರೋಪಿಗಳ ಈ ಕೃತ್ಯವು ಬೇಕರಿಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಗೊಂಡಿದೆ. ಘಟನೆ ಸಂಬಂಧ ಹೊಳೆನರಸೀಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
