ಜಯಪುರ: ಅತ್ತಿಕುಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಸಾತುಕಡಿಗೆ ಬಳಿ ಮಳೆಯ ನೀರು ನುಗ್ಗಿ ಚರಂಡಿಯ ಮಣ್ಣು ಕುಸಿದು ಕೊಗ್ರೆಯಿಂದ ಕಲ್ಲುಗುಡ್ಡೆ, ಮೆಣಿಸಿನ ಹಾಡ್ಯ ಹಾಗೂ ಹೊರನಾಡು ಶೃಂಗೇರಿ ಸಂಪರ್ಕಿಸುವ ರಸ್ತೆ ಕುಸಿದು ಸಂಪರ್ಕವೇ ಕಡಿತಗೊಳ್ಳುವ ಸಂಧರ್ಭ ಎದುರಾಗಿದೆ.

ಮಳೆಯು ಹೆಚ್ಚಾಗಿದ್ದು ಸರಿಯಾದ ಚರಂಡಿಯ ವ್ಯವಸ್ಥೆ ಇಲ್ಲದಿರುವುದು ಈ ರೀತಿಯ ರಸ್ತೆಯ ಬದಿ ಕುಸಿಯಲು ಕಾರಣ ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸಿದ್ದಾರೆ. ಈ ಹಿಂದೆಯೂ ಇಲ್ಲಿ ರಸ್ತೆ ಕುಸಿದಿತ್ತು ಈಗ ಮತ್ತೆ ಕುಸಿದಿದ್ದು ಈ ಭಾರಿಯಾದರು ಗ್ರಾಮಸ್ಥರಿಗೆ ಪ್ರಯಾಣಿಕರಿಗೆ ಮುಂದೆಯೂ ಸಮಸ್ಯೆಯಾಗದಂತೆ ಶಾಶ್ವತವಾಗಿ ಬಗೆಹರಿಸುವಂತೆ ಗ್ರಾಮಸ್ಥರು ಮನವಿ ಮಾಡಿದ್ದಾರೆ.
ಮನೆಗಳು ಅಪಾಯದಲ್ಲಿ ಮುಖ್ಯ ರಸ್ತೆಗೆ ಮಾಡಿದ ಚರಂಡಿಯೂ ಕೆಳಗೆ ಹಾದು ಹೋಗಿರುವುದರಿಂದ ಆ ಭಾಗದಲ್ಲಿ ಇರುವ ಮನೆಗಳ ವರೆಗೂ ಚರಂಡಿಯೂ ಕೊರೆದಿದ್ದು ಮೂರ್ನಾಲ್ಕು ಮನೆಗಳಿಗೂ ಹಾನಿಯಾಗುವ ಸಾಧ್ಯತೆ ಇದ್ದು, ಒಂದು ಮನೆಯವರು ಈಗಾಗಲೇ ಮನೆ ಖಾಲಿ ಮಾಡಿ ಬಾಡಿಗೆ ಮನೆಯೊಂದರಲ್ಲಿ ವಾಸಿಸುತ್ತಿದ್ದಾರೆ.
ಸ್ಥಳಕ್ಕೆ ಇಲಾಖೆಯ ಇಂಜಿನಿಯರ್ ಭೇಟಿ
ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಇಂಜಿನಿಯರ್ ಸುನೀಲ್ ಭೇಟಿ ನೀಡಿ ಸ್ಥಳ ಪರಿಶೀಲಿಸಿ ತುರ್ತಾಗಿ ಮರಳಿನ ಮೂಟೆ ಇರಿಸಿ ಮತ್ತೆ ಕುಸಿಯದಂತೆ ವ್ಯವಸ್ಥೆ ಮಾಡುವ ಭರವಸೆ ನೀಡಿದ್ದಾರೆ.
ಸ್ಥಳಕ್ಕೆ ಆಗಮಿಸಿ ಸ್ಪಂದಿಸಿದ ಪೋಲಿಸ್ ಇಲಾಖೆ
ಸ್ಥಳಕ್ಕೆ ಜಯಪುರ ಪಿಎಸ್ಐ ರವೀಶ್ ಭೇಟಿ ಮಾಡಿ ಗ್ರಾಮಸ್ಥರ ಸಮಸ್ಯೆಗಳನ್ನು ಆಲಿಸಿ, ಜಾಗರೂಕತೆಯಿಂದ ಸಂಚರಿಸುವಂತೆ ತಿಳಿಸಿ, ಇಲಾಖೆಯ ಗಮನಕ್ಕೆ ತರುವುದಾಗಿ ಹೇಳಿ. ಬ್ಯಾರಿಕೇಡ್ ಅಳವಡಿಸಿದ್ದಾರೆ.
ಇಲಾಖೆ ಕೊಟ್ಟ ಮಾತಿನಂತೆ ನಾಳೆಯೇ ಮರಳು ಮೂಟೆಗಳನ್ನು ಜೋಡಿಸಿ ರಸ್ತೆಯನ್ನು ಗ್ರಾಮಸ್ಥರಿಗೆ ಉಳಿಸಿ ಕೊಡುತ್ತ ಎಂದು ಕಾದು ನೋಡಬೇಕಿದೆ.
ವರದಿ: ಶಶಿ ಬೆತ್ತದಕೊಳಲು
