Saturday, May 23, 2026
Homeಕ್ರೈಮ್ಚಿಕ್ಕಮಗಳೂರಲ್ಲಿ ಸಿ.ಟಿ. ರವಿ ಕಾರನ್ನು ಅಡ್ಡಗಟ್ಟಿ ಗಲಾಟೆ ಕೇಸ್:‌  ಕಾಂಗ್ರೆಸ್ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ...

ಚಿಕ್ಕಮಗಳೂರಲ್ಲಿ ಸಿ.ಟಿ. ರವಿ ಕಾರನ್ನು ಅಡ್ಡಗಟ್ಟಿ ಗಲಾಟೆ ಕೇಸ್:‌  ಕಾಂಗ್ರೆಸ್ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಕಿಡಿ

ಬೆಂಗಳೂರು: ಹಾಲಿ ವಿಧಾನ ಪರಿಷತ್ ಸದಸ್ಯ ಹಾಗೂ ಬಿಜೆಪಿ ಹಿರಿಯ ನಾಯಕ ಸಿ.ಟಿ. ರವಿ ಅವರ ಕಾರನ್ನು ಅಡ್ಡಗಟ್ಟಿ ಗಲಾಟೆ ಮಾಡಿರುವ ಘಟನೆಯನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ತೀವ್ರವಾಗಿ ಖಂಡಿಸಿದ್ದಾರೆ. ಈ ಕುರಿತು ಆಡಳಿತಾರೂಢ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿರುವ ಅವರು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದಿದೆ ಎಂದು ಆರೋಪಿಸಿದ್ದಾರೆ.

​”ಸಿ.ಟಿ. ರವಿ ಅವರ ಕಾರನ್ನು ಅಡ್ಡಗಟ್ಟಿ ಗಲಾಟೆ ಮಾಡಿರುವುದು ಆಕಸ್ಮಿಕವಲ್ಲ, ಇದು ಉದ್ದೇಶಪೂರ್ವಕವಾಗಿ ನಡೆಸಿರುವ ಸಂಚು. ಆಡಳಿತ ಪಕ್ಷದ ಕಾರ್ಯಕರ್ತರ ಇಂತಹ ಗೂಂಡಾವರ್ತನೆಯನ್ನು ನಾನು ಕಟುವಾಗಿ ಖಂಡಿಸುತ್ತೇನೆ.” ಎಂದು ವಿಜಯೇಂದ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ

​ರಾಜ್ಯದಲ್ಲಿ ಕಾಂಗ್ರೆಸ್ ದುರಾಡಳಿತದಿಂದಾಗಿ ಗೂಂಡಾಗಳಿಗೆ ಭಯವಿಲ್ಲದಂತಾಗಿದೆ ಎಂದಿರುವ ಅವರು, “ಒಬ್ಬ ಹಿರಿಯ ಜನಪ್ರತಿನಿಧಿಗೇ ರಕ್ಷಣೆಯಿಲ್ಲದಿದ್ದರೆ, ಇನ್ನು ಜನಸಾಮಾನ್ಯರಿಗೆ ಈ ಸರ್ಕಾರ ಏನು ಸುರಕ್ಷತೆ ನೀಡಲು ಸಾಧ್ಯ? ಸಿ.ಟಿ.ರವಿಯವರನ್ನು ಅಡ್ಡಗಟ್ಟಿ ದುರ್ವರ್ತನೆ ತೋರುವಷ್ಟು ಧೈರ್ಯ ಕಾಂಗ್ರೆಸ್ ಕಾರ್ಯಕರ್ತರಿಗೆ ಬಂದದ್ದು ಎಲ್ಲಿಂದ? ಇದರ ಹಿಂದೆ ಯಾರ ಕುಮ್ಮಕ್ಕಿದೆ?” ಎಂದು ಪ್ರಶ್ನಿಸಿದ್ದಾರೆ.

​ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೌನವನ್ನು ಪ್ರಶ್ನಿಸಿರುವ ವಿಜಯೇಂದ್ರ, “ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ, ಒಬ್ಬ ಶಾಸಕರ (ವಿಧಾನ ಪರಿಷತ್ ಸದಸ್ಯರ) ಮೇಲೆ ಗೂಂಡಾವರ್ತನೆ ತೋರಿದವರ ವಿರುದ್ಧ ನಿಮ್ಮ ಸರ್ಕಾರ ದಿವ್ಯ ಮೌನ ವಹಿಸಿರುವುದು ಏಕೆ? ಈ ಮೌನ ಅಪರಾಧಿಗಳಿಗೆ ನೀಡುತ್ತಿರುವ ಬೆಂಬಲವೇ?” ಎಂದು  ತರಾಟೆಗೆ ತೆಗೆದುಕೊಂಡಿದ್ದರೆ

ಒಂದು ವೇಳೆ ಸರ್ಕಾರ ಕಠಿಣ ಕ್ರಮ ಕೈಗೊಳ್ಳದಿದ್ದರೆ, ಬಿಜೆಪಿ ಕಾರ್ಯಕರ್ತರು ಸಾರ್ವಜನಿಕರೊಂದಿಗೆ ಬೀದಿಗಿಳಿದು ಉಗ್ರ ಹೋರಾಟ ನಡೆಸಲಿದ್ದಾರೆ. “ನಾವು ಕೈಕಟ್ಟಿ ಕೂರುವ ಪ್ರಶ್ನೆಯೇ ಇಲ್ಲ” ಎಂದು ವಿಜಯೇಂದ್ರ ಸ್ಪಷ್ಟಪಡಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!